*ಹಿರಿಯ ನಾಗರಿಕರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಿ: ನ್ಯಾ.ಕೆ.ಎನ್ ಶಿವಕುಮಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ನಾಗರಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸುವುದರ ಜೊತೆಗೆ ಅವರಲ್ಲಿನ ಅನುಭವಗಳನ್ನು ಇಂದಿನ ಯುವ ಜನತೆ ಅನುಸರಿಸರಿಸಿದಲ್ಲಿ ಜೀವನದಲ್ಲಿ ಸಾಧನೆಗೈಯಲು ಅನುಕೂಲವಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್.ಶಿವಕುಮಾರ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜೂನ್ 15( ಸೋಮ ವಾರ) ಜರುಗಿದ ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ.
ಬದಲಾಗುತ್ತಿರುವ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಯುವಜನತೆ ಹಿರಿಯ ನಾಗರಿಕರನ್ನು ಕಡೆಗಣನೆ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಹಿರಿಯ ನಾಗರಿಕರಲ್ಲಿನ ಜ್ಞಾನ ಅನುಭವದ ಮಾತುಗಳನ್ನು ಇಂದಿನ ಯುವ ಜನತೆ ಆಲಿಸಿ ಅವುಗಳನ್ನು ಅನುಸರಿಸಿದಲ್ಲಿ ಸಮಾಜದಲ್ಲಿ ಉತ್ತಮ ನಾಗರಿಕರಾಗುವುದರ ಜೊತೆಗೆ ಒಳ್ಳೆಯ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಸರಕಾರಿ ಕಚೇರಿಗಳಿಗೆ ಆಗಮಿಸುವಂತಹ ಹಿರಿಯ ನಾಗರಿಕರಿಗೆ ಪ್ರಥಮಾದ್ಯತೇ ನೀಡಬೇಕು. ಸರಕಾರಿ ಕಚೇರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಕೆ. ಎನ್. ಶಿವಕುಮಾರ್ ಅವರು ನುಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಉದಯಕುಮಾರ ತಳವಾರ, ಜಿಲ್ಲಾ ಪಿಂಚಣಿ ಅಧಿಕಾರಿಗಳಾದ ಶ್ರೀಶೈಲ್ ಪರಂಗಿ, ಕರ್ನಾಟಕ ಸ್ಟೇಟ್ ಸೀನಿಯರ್ ಸಿಟಿಜನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾದ ಎಸ್.ಜಿ. ಸಿನ್ನಾಳ, ನ್ಯಾಯವಾದಿಗಳಾದ ವಾಯ್.ಎಂ.ಬೆಂಡಿಗೇರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಂ.ವಿ.ಹಿರೇಮಠ, ರಾಷ್ಟ್ರೀಯ ಹಿರಿಯ ನಾಗರಿಕರ ಸಂಗದ ಉಪಾಧ್ಯಕ್ಷರು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ನಾಮದೇವ ಬೀಲ್ಕರ್ ಸೇರಿದಂತೆ ಹಿರಿಯ ನಾಗರಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.




