
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸಂಗಮೇಶ್ವರ ನಗರದಲ್ಲಿ ಇರುವ ಡಾ. ಬಿ ಆರ್ ಅಂಬೇಂಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳ ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ತಡರಾತ್ರಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಊಟ ಮಾಡಲು ಹೋದರೆ ಊಟದಲ್ಲಿ ಹುಳು ಬರುತ್ತೆ. ಜಳಕಕ್ಕೆ ಹೋದರೆ ನೀರೇ ಬರಲ್ಲ. ಕುಡಿಯಲು ಸಹ ಶುದ್ಧ ನೀರು ಇಲ್ಲ. ನಲ್ಲಿ ನೀರು ಕುಡಿದು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಹಾಸ್ಟಲ್ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು.
ವಸತಿ ನಿಲಯದಲ್ಲಿ ಕಳೆದ ಹಲವು ದಿನಗಳಿಂದ ನೀರಿನ ಅಭಾವ ಎದುರಾಗಿದೆ. ಶುದ್ಧ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಶೌಚಕ್ಕೆ ಹೋಗಲು ಸಹ ಆಗುತ್ತಿಲ್ಲ. ಊಟದಲ್ಲಿ ಪದೆ ಪದೆ ಹುಳುಗಳು ಬರುತ್ತಿದೆ. ಮುಂದೆ ನಿಂತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕಿದ್ದ ವಾರ್ಡನ್ ವಾರಕ್ಕೊಮ್ಮ ಬಂದು ಹೋದ್ರೆ ಮುಗಿತು. ಹಾಸ್ಟೆಲ್ ಕಡೆ ಕಣ್ಣೆತ್ತಿನು ನೋಡಲ್ಲ ಎಂದು ದೂರಿದರು.
ನಿನ್ನೆ ರಾತ್ರಿ ಹಾಸ್ಟೆಲ್ ಗೆ ಅಪರೂಪಕ್ಕೆ ವಾರ್ಡನ್ ಆಗಮಿಸಿದ್ದರು, ಈ ವೇಳೆ ವಿದ್ಯಾರ್ಥಿಗಳ ತಟ್ಟೆಯಲ್ಲಿ ಹುಳುಗಳು ಕಾಣಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಊಟ ಬಿಟ್ಟು ಅಡುಗೆ ಪಾತ್ರೆ ಹೊರಗೆ ಇಟ್ಟು ಪ್ರತಿಭಟಿಸಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಹಾಗೂ ಜಂಟಿ ನಿರ್ದೇಶಕರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ಅಷ್ಟೊತ್ತಿಗೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ ಅವರು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ, ಪ್ರತಿಭಟನೆ ವಾಪಸ್ ಪಡೆಯುವಂತೆ ಮನ ಒಲಿಸಿದರು.
ಮುಂದೆ ಈ ರೀತಿ ಆಗದಂತೆ ಮೇಲಾಧಿಕಾರಿಗಳ ಜೊತೆ ನಿಲಯದಲ್ಲಿ ಸಭೆ ಮಾಡಿ ಸರಿಪಡಿಸೋಣ ಎಂದು ಹೇಳಿದರು. ಮತ್ತೊಂದೆಡೆ ಫುಡ್ ಪಾಯಿಸನ್ ಆಗಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ ಆಗಬಾರದು ಎಂದು ಆ್ಯಂಬುಲೆನ್ಸ್ ಕರೆಸಲಾಗಿತ್ತು.



