Karnataka NewsLatestPolitics

*ಬಿಡದಿ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಬಿಡದಿಯ ರೈತರು ಒಳ್ಳೆಯವರು, ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಯೋಜನೆಯ ಪಿತಾಮಹ ಕುಮಾರಸ್ವಾಮಿ ಅವರೇ
ಅಲ್ಲವೇ? ಇದನ್ನು ಅವರೇ ಒಪ್ಪಿಕೊಂಡಿದ್ದಾರೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದರು.

ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಟೌನ್ ಶಿಪ್ ವಿಚಾರದ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, “ಈ ಹಿಂದೆ ಕುಮಾರಸ್ವಾಮಿ ಅವರೇ ರೈತರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ 40% ಕೊಡುತ್ತೇನೆ ಎಂದು ಹೇಳಿದ್ದರು. ನಾವು ಶೇ.50 ರಷ್ಟು ಭೂಮಿ ನೀಡುವುದಾಗಿ ಹೇಳಿದ್ದೇವೆ. ರೈತರಿಗೆ ಒಂದು ಎಕರೆಗೆ 2.50 ಕೋಟಿ ರೂ. ಪರಿಹಾರ ನೀಡುವ ಕೆಲಸ ಶುಕ್ರವಾರ ಆರಂಭವಾಗಿದೆ” ಎಂದರು.

ಕುಮಾರಸ್ವಾಮಿ ಆರಂಭಿಸಿ, ಯಡಿಯೂರಪ್ಪನವರು ಮುಂದುವರಿಸಿದ್ದ ಯೋಜನೆ

Home add -Advt

“ಕುಮಾರಸ್ವಾಮಿ ಅವರು ನೋಟಿಫಿಕೇಷನ್ ಮಾಡಿದ್ದರು. ಯಡಿಯೂರಪ್ಪ ಅವರು ಈ ಯೋಜನೆ ಮುಂದುವರೆಸಿದ್ದರು. ಅದನ್ನು ನಾವು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆಯೇ ಹೊರತು ಹೊಸದಾಗಿ ನಾವೇನೂ ಮಾಡುತ್ತಿಲ್ಲ. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿದವರು ಯಾರು? ಈಗಿರುವ 9 ಸಾವಿರ ಎಕರೆಯಲ್ಲಿ 1 ಸಾವಿರ ಎಕರೆಯನ್ನು ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ವಾಧೀನ ಮಾಡಿಕೊಡಲಿಲ್ಲವೇ?” ಎಂದರು.

ಎಲ್ಲಿಂದ ಜಮೀನು ಕೊಡಲಿ ಎಂದು ಅವರೇ ಹೇಳಿದ್ದಾರೆ

“ವಿರೋಧ ಪಕ್ಷದವರು ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಹೊಸ ಕೈಗಾರಿಕೆಗಳು ಬರಬೇಕು ಎಂದು ಹೇಳುತ್ತಾರೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವರೇ ಎಲ್ಲಿಂದ ಜಮೀನು ತೆಗೆದುಕೊಡಲಿ ಎಂದು ಹೇಳಿದ್ದಾರೆ. ಹೀಗಿರುವಾಗ ಬಿಡದಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ” ಎಂದರು.

ರೆಡ್ ಜೋನ್ ಮಾಡಿದ್ದೇಕೆ?

“ಬಿಡದಿ ಪ್ರದೇಶವನ್ನು ರೆಡ್ ಜೋನ್ ಎಂದು ಕುಮಾರಸ್ವಾಮಿ ಅವರು ಏಕೆ ಘೋಷಣೆ ಮಾಡಿದರು ಎಂದು ಅವರು ಮೊದಲು ತಿಳಿಸಲಿ. ನೋಟಿಫಿಕೇಷನ್ ಏಕೆ ಮಾಡಿದರು ಎಂದು ಉತ್ತರಿಸಲಿ. ಯಡಿಯೂರಪ್ಪ ಅವರು ಏಕೆ ಮುಂದುವರೆಸಿದರು, ಅವರ ಕಾಲದಲ್ಲೇ ಡಿನೋಟಿಫಿಕೇಷನ್ ಮಾಡಲು ಅವರಿಗೆ ಅವಕಾಶವಿತ್ತಲ್ಲವೇ? ಯಾಕೆ ಮಾಡಲಿಲ್ಲ” ಎಂದರು.

“ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾನು ಇದಕ್ಕೆ ಬೇಸರ ಮಾಡಿಕೊಳ್ಳುವುದಿಲ್ಲ. ಶೇ 80 ರಷ್ಟು ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಬೇರೆಯವರು ಮುಂದೆ ಬರಲಿಲ್ಲ ಎಂದರೆ ನಾನು ಏನು ಮಾಡಲು ಸಾಧ್ಯವಿಲ್ಲ. ನಾವು ಕಾನೂನಿನ ಪ್ರಕಾರ ಹೋಗುತ್ತೇವೆ” ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರ ರಕ್ತಕ್ರಾಂತಿ ಆಗುತ್ತದೆ ಎನ್ನುವ ಹೇಳಿಕೆಯ ಬಗ್ಗೆ ಕೇಳಿದಾಗ, “ಅವರು ದೊಡ್ಡವರು. ಬೃಹತ್ ಕೈಗಾರಿಕಾ ಸಚಿವರು. ಅವರಿಗೆ ಕೈಗಾರಿಕೆಗಳನ್ನು ತರಬೇಕು ಎನ್ನುವ ಆಸೆಯಿದೆ. ಎಲ್ಲಿಗೆ ಕೈಗಾರಿಕೆಗಳನ್ನು ತರಬೇಕು, ಹೇಗೆ ತರಬೇಕು, ಯಾರ ಜಮೀನಿನಲ್ಲಿ ತರಬೇಕು ಎಂದು ಅವರೇ ಉತ್ತರ ಹೇಳಬೇಕು” ಎಂದರು.

Related Articles

Back to top button