Kannada NewsLatestNational

*ಭಾರಿ ಮಳೆ ಅಬ್ಬರ: ಮುಂಬೈ-ಪುಣೆ ಸುರಂಗ ಮಾರ್ಗದೊಳಗೆ ನುಗ್ಗಿದ ನೀರು; ಭೂಕುಸಿತದಿಂದ ರಸ್ತೆ ಬಂದ್*

ಪ್ರಗತಿವಾಹಿನಿ ಸುದ್ದಿ: ವಾಣಿಜ್ಯ ನಗರಿ ಮುಂಬೈ ಹಾಗೂ ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಹೊಸದಾಗಿ ನಿರ್ಮಿಸಲಾದ ‘ಮಿಸ್ಸಿಂಗ್ ಲಿಂಕ್’ (Missing Link) ಯೋಜನೆಯ ಸುರಂಗ ಮಾರ್ಗದೊಳಗೆ ಭಾರಿ ಪ್ರಮಾಣದ ನೀರು ನುಗ್ಗಿದೆ.

ಬೆಟ್ಟದಿಂದ ಹರಿದ ನೀರು ಜಲಪಾತದಂತೆ ಧುಮ್ಮುಕ್ಕಿದ್ದು, ಸುರಂಗದೊಳಗೆ ನದಿಯಂತೆ ನೀರು ನುಗ್ಗುತ್ತಿದೆ. ವಾಹನ ಸವಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋಗಳು ವೈರಲ್ ಆಗಿದ್ದು, ಸುರಂಗದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಸುರಂಗ ಮಾರ್ಗದ ಸಮೀಪವಿರುವ ಬೆಟ್ಟದ ಇಳಿಜಾರಿನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ದೊಡ್ಡ ಬಂಡೆಗಳು ಮತ್ತು ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಈ ಪ್ರಮುಖ ‘ಮಿಸ್ಸಿಂಗ್ ಲಿಂಕ್’ ರಸ್ತೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅದೃಷ್ಟವಶಾತ್, ಭೂಕುಸಿತ ಸಂಭವಿಸಿದ ಸಮಯದಲ್ಲಿ ಯಾವುದೇ ವಾಹನಗಳು ಸಿಲುಕದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಖಂಡಾಲಾ ಘಾಟ್‌ನ ಕಡಿದಾದ ತಿರುವುಗಳನ್ನು ತಪ್ಪಿಸಲು ಈ ಬೃಹತ್ ಸುರಂಗ ಮಾರ್ಗ ಮತ್ತು ಮೇಲ್ಸೇತುವೆಯ ‘ಮಿಸ್ಸಿಂಗ್ ಲಿಂಕ್’ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಮೊದಲ ಮಳೆಗೇ ಈ ಅತ್ಯಾಧುನಿಕ ಸುರಂಗದೊಳಗೆ ನೀರು ನುಗ್ಗಿರುವುದು ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

Home add -Advt

Related Articles

Back to top button