*2028ಕ್ಕೆ ಮೂವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ.ಶಿವಕುಮಾರ* *ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ!*

2028 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ: ಸಿಎಂ ಡಿ ಕೆ ಶಿವಕುಮಾರ್
ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ
ಪ್ರತಿ ಕಾರ್ಯಕರ್ತನಿಗೆ ಪಕ್ಷವು ಗೌರವ ನೀಡುತ್ತಿದೆ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ :
“2028 ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ ಇದೇ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ, ಇರಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಿವಕುಮಾರ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
“*ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಅವರು ಹಾಗೂ ನನ್ನ ನೇತೃತ್ವದಲ್ಲಿ 2028ಕ್ಕೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದೆ ತರುತ್ತೇವೆ*. ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ರಸ್ತೆಯನ್ನು ತೊಳೆದು ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಂದು ತೊಲಗಿಸಲಾಯಿತು. ನಂತರ ಗೃಹಜೋತಿ ಮೊದಲ ಗ್ಯಾರಂಟಿ ಯೋಜನೆಯನ್ನು ಈ ಬೆಳಗಾವಿ ನೆಲದಲ್ಲೇ ಘೋಷಣೆ ಮಾಡಲಾಯಿತು. ಅದಕ್ಕೆ ಇದೇ ನೆಲದಲ್ಲಿ ನಿಂತು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ” ಎಂದರು.
“ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಈ ಹಿಂದೆ ಇದ್ದಂತಹ ಬಿಜೆಪಿ ಸರ್ಕಾರ ಜನಪರವಾದ ಒಂದೇ ಒಂದು ತೀರ್ಮಾನವನ್ನು ಸಹ ಮಾಡಲಿಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರು. ನಾವು ಬದುಕಿನ ಮೇಲೆ ರಾಜಕಾರಣ ಮಾಡಿದೆವು” ಎಂದು ಹೇಳಿದರು.
ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ
“ರಾಮ ನಮ್ಮ ಬಳಿ ಇಲ್ಲವೇ? ಎಲ್ಲಾ ಧರ್ಮದವರು ನಮ್ಮಲ್ಲಿದ್ದಾರೆ. ನಾವು ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇವೆ. ಬಿಜೆಪಿಯವರು ಮನೆ ಮನೆಗೆ ಮಂತ್ರಾಕ್ಷತೆ ಹಂಚಿದರು. ಈ ಅಕ್ಷತೆ ಅಯೋಧ್ಯೆಯ ರಾಮಮಂದಿರದಿಂದ ಬಂದಿದ್ದು ಎಂದು ಹೇಳಿದರು. ಅದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ. ನಾವು ಕೊಟ್ಟಂತಹ ಅನ್ನ ಭಾಗ್ಯ ಅಕ್ಕಿಗೆ ಅರಿಶಿನ ಕುಂಕುಮ ಹಾಕಿ ಅದನ್ನು ಮಂತ್ರಾಕ್ಷತೆ ಎಂದು ಹಂಚಿದರು” ಎಂದರು.
“ಇಡೀ ದೇಶದ ಜನರ ಭಾವನೆಗೆ ಧಕ್ಕೆಯಾಗಿದೆ. ನಂಬಿಕೆಗೆ ಸ್ವಾಭಿಮಾನಕ್ಕೆ ದ್ರೋಹ ಎಸೆಗಲಾಗಿದೆ. ನೀವು ಸೇರಿದಂತೆ ಈ ದೇಶದ ಎಷ್ಟೋ ಜನ ರಾಮಮಂದಿರಕ್ಕೆ ಸಣ್ಣ ಕಾಣಿಕೆ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಕಾಣಿಕೆ ಕೊಟ್ಟಿದ್ದಾರೆ. ಆದರೆ ಅಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ತಿಳಿದುಕೊಂಡಿದ್ದೀರಿ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಮಾಧ್ಯಮಗಳಲ್ಲಿ ಅಯೋಧ್ಯೆಯಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ” ಎಂದರು.
ನಾನು ಮುಖ್ಯಮಂತ್ರಿಯಲ್ಲ ಕಾರ್ಯಕರ್ತ
“ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಯವರು ನನಗೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಎನ್ನುವುದಕ್ಕಿಂತ ಪಕ್ಷದ ಕಾರ್ಯಕರ್ತ. ಸಿದ್ದರಾಮಯ್ಯನವರು ಎಂಟು ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಕೊಡುಗೆ ಕೊಟ್ಟಿದ್ದಾರೆ. ಜೊತೆಗೆ ಪಕ್ಷದ ಬಲವರ್ಧನೆ ಮಾಡಿದ್ದಾರೆ” ಎಂದರು.
“ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ರಾಹುಲ್ ಗಾಂಧಿಯವರ ಆಶಯದಂತೆ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆಗೆ ಮುಂದಾಗಿದ್ದೇವೆ. ಈ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಯನ್ನು ಪ್ರಾರಂಭಿಸಲಾಗುವುದು. ನಮ್ಮ ಮಕ್ಕಳೇ ನಾಯಕರಾಗುವುದಲ್ಲ. ನಾನು ವಿದ್ಯಾರ್ಥಿ ನಾಯಕನಾಗಿದ್ದೆ ಬಿ ಕೆ ಹರಿಪ್ರಸಾದ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು ಹೀಗೆ ರಾಜ್ಯದ ಪ್ರತಿಯೊಂದು ಊರಿನಲ್ಲೂ ವಿದ್ಯಾರ್ಥಿ ನಾಯಕರು ಬೆಳೆಯಬೇಕು” ಎಂದರು.
“ಐದು ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಸಿಎಜಿ ವರದಿ ಪ್ರಕಾರ ಒಂದಷ್ಟು ವ್ಯತ್ಯಾಸಗಳಾಗಿವೆ. ಆದ ಕಾರಣ ಮರುಪರಿಶೀಲನೆ ಮಾಡುತ್ತಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ನಮ್ಮ ರಾಜ್ಯದವರಿಗೆ ನಮ್ಮ ಮತದಾರರಿಗೆ ನಾವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ” ಎಂದರು.
“ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ಬಿ ಎಲ್ ಓ ಗಳು ನೀಡಿರುವ ಅರ್ಜಿಯನ್ನು ಜನರಿಂದ ತುಂಬಿಸಿ ಅದನ್ನು ಪಕ್ಷದ ಬಿಎಲ್ ಎಗಳು ಪಡೆದು ಬಿ ಎಲ್ ಒ ಗಳಿಗೆ ನೀಡಬೇಕು. ನಾನು ಸಹ ಅರ್ಜಿಯನ್ನು ತುಂಬಿ ಸಹಿ ಹಾಕಿ ನೀಡಿದ್ದೇನೆ. ಯಾರೋ ಒಬ್ಬರು ಸಹ ಮತವನ್ನು ಕಳೆದುಕೊಳ್ಳಬೇಡಿ” ಎಂದರು.
“ನಮ್ಮ ಸರ್ಕಾರ ಉಚಿತವಾಗಿ ವಾಸ ದೃಢೀಕರಣ ಪತ್ರ ನೀಡುತ್ತಿದೆ. ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಸಹ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಸರ್ಕಾರಿ ಸೌಲಭ್ಯಗಳು ನಿಮಗೆ ಸಿಗಬೇಕು ಎಂದರೆ ಯಾರೊಬ್ಬರೂ ಮತವನ್ನು ಕಳೆದುಕೊಳ್ಳಬೇಡಿ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ” ಎಂದರು.
“ನಾವು ಬಿಜೆಪಿಯವರಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ. ಸರ್ಕಾರ ಇದೆ ಎಂದು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ಅವರು ಆರೋಪ ಮಾಡುತ್ತಿದ್ದಾರೆ. ಅವರು ಏನಾದರೂ ರಾಜಕಾರಣ ಮಾಡಿಕೊಳ್ಳಲಿ. ಪ್ರತಿಯೊಬ್ಬರ ಮತವನ್ನು ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಉಳಿಸಬೇಕು. ಮೊದಲ ಬಾರಿಗೆ ಮತ ಹಾಕುತ್ತಿರುವವರನ್ನು ಗಮನಿಸಿ ಅವರಿಂದಲೂ ಅರ್ಜಿ ಸಲ್ಲಿಸಬೇಕು” ಎಂದರು.
ಪ್ರತಿ ಕಾರ್ಯಕರ್ತನಿಗೆ ಪಕ್ಷವು ಗೌರವ ನೀಡುತ್ತಿದೆ
“ಕಾರ್ಯಕರ್ತರು ಅಧಿಕಾರ ಸಿಗಲಿಲ್ಲ ಎಂದು ಬೇಸರ ಪಡಬೇಡಿ. ಪ್ರತಿ ತಾಲೂಕಿನಲ್ಲೂ 15 ಜನರ ಗ್ಯಾರಂಟಿ ಸಮಿತಿಯನ್ನು ರಚಿಸಲಾಯಿತು. ಈಗ ಆರು ಜನರ ಗ್ಯಾರಂಟಿ ಸಮಿತಿಯನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ರಚಿಸಲಾಗುತ್ತಿದೆ. ನಿಮಗೆ ಒಂದು ಹೆಗ್ಗುರುತನ್ನು ನಮ್ಮ ಸರ್ಕಾರ ನೀಡಿದೆ. ನಿಮಗೆ ಗೌರವ ಹಾಗೂ ಹುದ್ದೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಈ ಸಮಿತಿಯಲ್ಲಿ ಪ್ರತಿ ಸಮುದಾಯದ ಪ್ರತಿಧರ್ಮದ ಪ್ರತಿನಿಧಿಗಳು ಹಾಗೂ ಒಬ್ಬರು ಮಹಿಳೆ ಕಡ್ಡಾಯವಾಗಿ ಇರಲೇಬೇಕು” ಎಂದರು.
“ಮುಂದಿನ ಎರಡು ಮೂರು ತಿಂಗಳಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತವೆ. ಈ ಚುನಾವಣೆಗಳಿಗೆ ಎಲ್ಲಾ ಕಾರ್ಯಕರ್ತರು, ನಾಯಕರು ಸಜ್ಜಾಗಿ ಇರಬೇಕು” ಎಂದು ಕರೆ ನೀಡಿದರು.




