*ಶಟರ್ ತೆಗೆದಿಲ್ಲ, ಬಾಗಿಲು ಮುರಿದಿಲ್ಲ; ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ನಾಪತ್ತೆ: ಸಿಸಿಟಿವಿ ದೃಶ್ಯ ನೋಡಿ ಶಾಕ್ ಆದ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ವಿಚಿತ್ರ ಘಟನೆಯೊಂದರಲ್ಲಿ ಜ್ಯುವೆಲ್ಲರಿ ಶಾಪ್ ವೊಂದರಲ್ಲಿ ಶಟರ್ ಮುರಿಯದೇ, ಬಾಗಿಲ ಬೀಗ ತೆಗೆಯದೇ ರಾತ್ರಿ ಬೆಳಗಾಗುವಷ್ಟರಲ್ಲಿ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ನಡೆದಿದೆ.
ತುಮಕೂರಿನ ನಗರದ ಕಾಲ್ಟೆಕ್ಸ್ ಸರ್ಕಲ್ ಸಮೀಪದಲ್ಲಿರುವ ವಿಶ್ವಾಸ್ ಜ್ಯುವೆಲರಿ ಶಾಪ್ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಅಮ್ಗಡಿ ಮಾಲೀಕ ಜ್ಯುವೆಲ್ಲರಿ ಶಾಪ್ ಬಾಗಿಲು ತೆರೆದು ನೋಡಿದಾಗ ವಜ್ರ, ಚಿನ್ನಾಭರಣ ನಾಪತ್ತೆಯಾಗಿದೆ. ಇದನ್ನು ಕಂಡು ಗಾಬರಿಯಾಗಿದ್ದಾರೆ. ಪರಿಶೀಲಿಸಿದರೆ ಅಂಗಡಿಯ ಬಾಗಿಲು ಓಪನ್ ಆಗಿಲ್ಲ, ಹೊರಗಿನಿಂದ ಯಾರೂ ಒಳಗೆ ಬಂದಿಲ್ಲ. ಎಲ್ಲಿಯೂ ಕಳ್ಳರು ಅಂಗಡಿಗೆ ನುಗ್ಗಿದ ಸುಳಿವಿಲ್ಲ. ಆದರೂ ಇದ್ದಕ್ಕಿದ್ದಂತೆ ಅಂಗಡಿಯಲ್ಲಿದ್ದ ಚಿನ್ನಾಭರಣ ಮಾಯವಾಗಿದ್ದು ಹೇಗೆ? ಎಂದು ಕಂಗಾಲಾಗಾದ್ದಾರೆ.
ಈ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಅದರಲ್ಲಿನ ದೃಶ್ಯ ಕಂಡು ಮಾಲಿಕ ಶಾಕ್ ಆಗಿದ್ದಾರೆ. ಅಂಗಡಿಯಲ್ಲಿ 50 ಗ್ರಾಂಗೂ ಅಧಿಕ ತೂಕದ ವಜ್ರ ಹಾಗೂ ಚಿನ್ನಾಭರಣಗಳು ಬೆಳಗ್ಗೆ ನೋಡುವಾಗ ಕಾಣೆಯಾಗಿದ್ದವು. ಸರಗಳು ಮತ್ತು ಉಂಗುರಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನ ಮಾಲೀಕ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಒಂದು ಇಲಿ ಅಂಗಡಿಯೊಳಗೆ ಸದ್ದಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಬಳಿಕ ಅದೇ ಇಲಿ ಚಿನ್ನಾಭರಣಗಳನ್ನು ಎಳೆದೊಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ಎಗರಿಸಿದ ಇಲಿ, ಅವುಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿಟ್ಟಿದೆ.
ಇಲಿಯ ಜಾಡು ಹಿಡಿದ ಜ್ಯುವೆಲರಿ ಶಾಪ್ ಸಿಬ್ಬಂದಿ, ಸೇರಿಕೊಂಡಿದ್ದ ಬಿಲವನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬಿಲವನ್ನು ತೋಡಿದಾಗ ನಾಪತ್ತೆಯಾಗಿದ್ದ ಆಭರಣಗಳು ಅಲ್ಲಿ ಪತ್ತೆಯಾಗಿವೆ. ಒಂದೆರಡು ಆಭರಣಗಳಲ್ಲ, ಬರೋಬ್ಬರಿ 10 ಉಂಗುರಗಳು ಹಾಗೂ 3 ಸರಗಳನ್ನು ಇಲಿ ತನ್ನ ಬಿಲದಲ್ಲಿ ಇಟ್ಟುಕೊಂಡಿತ್ತು. ಆಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕಿದ್ದರಿಂದ ಜ್ಯುವೆಲರಿ ಶಾಪ್ ಮಾಲೀಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.




