*ಕಾವೇರಿ ವಿವಾದ: KRS ಗೇಟ್ ಬಳಿ ರೈತರು, ಮಹಿಳಾ ಹೋರಾಟಗಾರರಿಂದ ಉರುಳು ಸೇವೆ ಮಾಡಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶವನ್ನು ಖಂಡಿಸಿ ಕಾವೇರಿ ಕೊಳ್ಳ ಹಾಗೂ ಮಂಡ್ಯ ಭಾಗದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಒಂದೆಡೆ ರೈತರು, ಕನ್ನಡಪರ ಸಂಘಟನ್ರೆಗಳು ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ನಾಯಕರು ಇಂದು ಕೆ.ಆರ್.ಎಸ್ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಇಂದು ಮುಂಜಾನೆಯಿಂದಲೇ ಕೆ.ಆರ್.ಎಸ್ ಜಲಾಶಯದ ಬಳಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಆರ್ಎಸ್ ಜಲಾಶಯದ ಗೇಟ್ ಮುಂದೆ ರೈತರು, ಮಹಿಳಾ ಹೋರಾಟಗಾರರು ಉರುಳು ಸೇವೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ನಿಲ್ಲಬೇಲು ಎಂದು ಒತ್ತಾಯಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿ (CWMA) ಮತ್ತು CWRC ನೀಡಿದ ಆದೇಶದ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು ತಿರುಗಿ ಬಿದ್ದಿವೆ. ಪದೇ ಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಅಲ ಎದುರಾಗಿದೆ. ಮಳೆಯ ಸುಳಿವಿಲ್ಲ. ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಕರ್ನಾಟಕ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು, ರೈತರ ಹಿತ ಕಾಪಾಡಲು ಮಾಜಿ ಸಿಎಂ ಬಂಗಾರಪ್ಪ ಅವರಂತೆ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.


