*ಮುಂದಿನ 5 ವರ್ಷಗಳಿಗೆ ಪಿಎಂ-ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ: ಈರಣ್ಣ ಕಡಾಡಿ ಹರ್ಷ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ 2026–27ರಿಂದ 2030–31ರವರೆಗೆ ಮುಂದಿನ ಐದು ವರ್ಷಗಳಿಗೆ ಕಿಸಾನ್ ಸಮ್ಮಾನ ಯೋಜನೆಗೆ ಸುಮಾರು ರೂ. 3.15 ಲಕ್ಷ ಕೋಟಿ ಅನುದಾನ ಮಂಜೂರು ಮಾಡಿ ಯೋಜನೆಯನ್ನು ಮುಂದುವರಿಸಿ ರೈತರ ಹಿತಕಾಪಾಡಲು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅನುಮೋದನೆ ನೀಡಿರುವದು ರೈತರ ಕಲ್ಯಾಣದತ್ತ ಕೇಂದ್ರ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಆ-01 ಶನಿವಾರದಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ದೇಶದ ರೈತರ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ 2019ರಲ್ಲಿ ಪ್ರಾರಂಭಗೊಂಡ ಪಿಎಂ-ಕಿಸಾನ್ ಯೋಜನೆಯು, ಇಡೀ ವಿಶ್ವದಲ್ಲೇ ಅತಿ ದೊಡ್ಡ ನೇರ ನಗದು ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದರು.
ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂ.ಗಳ ಸಹಾಯಧನ ಯೋಜನೆಯನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದುವರೆಗೆ 23 ಕಂತುಗಳ ಮೂಲಕ ರೂ. 4.46 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ದೇಶದ ರೈತರಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. 23ನೇ ಕಂತಿನಲ್ಲಿ ಮಾತ್ರ 9.44 ಕೋಟಿಗೂ ಹೆಚ್ಚು ರೈತರಿಗೆ ರೂ.18,880 ಕೋಟಿಗೂ ಅಧಿಕ ಮೊತ್ತ ಜಮೆಯಾಗಿದೆ.
ಈ ಯೋಜನೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಇತರೆ ಕೃಷಿ ವೆಚ್ಚಗಳನ್ನು ನಿರ್ವಹಿಸಲು ನೆರವಾಗಿದ್ದು, ಅನೌಪಚಾರಿಕ ಸಾಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಲ್ಲಿ ಕಿಸಾನ ಸಮ್ಮಾನ ನಿಧಿ ಯೋಜನೆ ರೈತರಲ್ಲಿ ಮಂದಹಾಸ ಮೂಡಿಸುತ್ತಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಅತ್ಯಂತ ಪಾರದರ್ಶಕವಾಗಿದ್ದು, ಮಧ್ಯವರ್ತಿಗಳಿಲ್ಲದೆ ಹಣ ನೇರವಾಗಿ ರೈತರ ಖಾತೆಗೆ ತಲುಪುತ್ತಿದೆ. ಅರ್ಹ ರೈತರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು, ತಕ್ಷಣವೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮಾಜಿ ಸಂಸದ ಈರಣ್ಣ ಕಡಾಡಿ ಅವರು ರೈತರಿಗೆ ಮನವಿ ಮಾಡಿದ್ದಾರೆ.




