*ಮಹಾನಗರ ಪಾಲಿಕೆಯಿಂದ ರಕ್ಕಸಕೊಪ್ಪ ಜಲಾಶಯಕ್ಕೆ ಬಾಗಿನ ಅರ್ಪಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಶುಕ್ರವಾರ ಮಹಾನಗರ ಪಾಲಿಕೆಯಿಂದ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು.
ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ, ಆಯುಕ್ತ ಕಾರ್ತಿಕ್ ಎಂ. ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಮೇಯರ್ ಪ್ರೀತಿ ಕಾಮಕರ ಅವರು, ಜಲಾಶಯ ಸಂಪೂರ್ಣ ಭರ್ತಿಯಾಗಿ ಬಾಗಿನ ಅರ್ಪಿಸಿದ್ದು ಸಂತಸ ತಂದಿದೆ. ಇನ್ನು ಮುಂದೆ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗಲಾರದು. ಸಾರ್ವಜನಿಕರು ನೀರಿನ ಮಹತ್ವ ಅರಿತುಕೊಂಡು ಮಿತವಾಗಿ ಬಳಕೆ ಮಾಡಬೇಕೆಂದು ಕೋರಿದರು.
ಉಪ ಮಹಾಪೌರ ಹಣಮಂತ ಕೊಂಗಾಲಿ ಮಾತನಾಡಿ, ರಕ್ಕಸಕೊಪ್ಪ ಜಲಾಶಯದಿಂದ 42 ಎಂಎಲ್ಡಿ ಮತ್ತು ಹಿಡಕಲ್ ಜಲಾಶಯದಿಂದ 60 ಎಂಎಲ್ಡಿಯಷ್ಟು ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಜಲಾಶಯ ಭರ್ತಿಯಾಗಿ ದ್ದರಿಂದ ಮೇ ವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಲಾರದು. ಪಾಲಿಕೆಯಲ್ಲಿ ಚರ್ಚಿಸಿ ಜಲಾಶಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಾತನಾಡಿ, ಸತತ ಮಳೆಯಿಂದಾಗಿ 2475 ರಷ್ಟು ಎತ್ತರವಿರುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಈ ಹಿನ್ನೆಲೆಯಲ್ಲಿ
ನೀರಿನ ಕೊರತೆಯ ಸಂದರ್ಭದಲ್ಲಿ ಅನುಸರಿಸಲಾಗುತ್ತಿದ್ದ ನೀರು ಸರಬರಾಜು ನಿಯಮಗಳನ್ನು ರದ್ದುಪಡಿಸಿ ಈ ಮೊದಲಿನ ನಿಯಮದಂತೆ ನಗರದ 58 ವಾರ್ಡ್ ಗಳ 80,000 ಸಂಪರ್ಕಗಳಿಗೆ ನೀರು ಪೂರೈಕೆ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡ್ನೇಕರ್, ಸ್ಥಾಯಿ ಸಮಿತಿ ಸದಸ್ಯರು, ನಗರಸೇವಕರಾದ ಗಿರೀಶ ಧೋಂಗಡಿ, ಜಯತೀರ್ಥ ಸವದತ್ತಿ, ಮಂಗೇಶ ಪವಾರ, ಶ್ರೀಶೈಲ್ ಕಾಂಬಳೆ, ರೇಖಾ ಹೂಗಾರ, ದೀಪಾಲಿ ಟೊಪಗಿ, ಲಕ್ಷ್ಮೀ ರಾಥೋಡ್ ಸೇರಿದಂತೆ ಇತರ ನಗರ ಸೇವಕರು, ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.



