*ಪರಿಮಳ ಪುರಸ್ಕಾರಕ್ಕೆ ಜಂಗಲ್, ನೀಲಗಾರ ಆಯ್ಕೆ*

ಪರಿಮಳ ಪುರಸ್ಕಾರಕ್ಕೆ ಜಂಗಲ್, ನೀಲಗಾರ ಆಯ್ಕೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಪಾಚ್ಚಾಪುರದ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಕಮಿಟಿ ಕೊಡಮಾಡುವ ಪರಿಮಳ ಪುರಸ್ಕಾರ -2026ಕ್ಕೆ ನಿವೃತ್ತ ಇಂಜಿನಿಯರ್ ರಮೇಶ್ ಜಂಗಲ್ ಮತ್ತು ಸಾಹಿತಿ ಅಶೋಕ್ ಬಾಬು ನೀಲಗಾರ ಇವರು ಭಾಜನರಾಗಿದ್ದಾರೆ.
ರಮೇಶ್ ಜಂಗಲ್ ಇವರು ಕರ್ನಾಟಕ ಸರ್ಕಾರದ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
ಅಶೋಕ್ ಬಾಬು ನೀಲಗಾರ ಇವರು ಎಲೆಮರೆಯ ಕಾಯಿಯಂತೆ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದು, 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಉತ್ತಮ ಗಾಯಕರೂ ಆಗಿರುವ ಇವರ ಸಾಧನೆಯನ್ನು ಗಮನಿಸಿ ಅವರಿಗೆ ಪರಿಮಳ ಪುರಸ್ಕಾರವನ್ನು ನೀಡಲಾಗಿದೆ ಎಂದು ಕಮಿಟಿ ತಿಳಿಸಿದೆ.
ಪ್ರಸ್ತುತ ಪಾಚ್ಚಾಪುರದಲ್ಲಿ ಆರಾಧನಾ ಮಹೋತ್ಸವದ ಸುವರ್ಣ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಪುರಸ್ಕಾರವು ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ಮತ್ತು 5000 ರೂ. ನಗದು ಒಳಗೊಂಡಿದೆ.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಕೊನೆಯ ದಿನ ಅಂದರೆ ಸೋಮವಾರ (ಆಗಸ್ಟ್ 31, 2026) ಸಂಜೆ ನಡೆಯುವ ಹಿರಿಯರ ಸಮಾವೇಶ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆರಾಧನ ಕಮಿಟಿಯ ಕಾರ್ಯದರ್ಶಿ ಮಂಜುನಾಥ್ ಪಾಟೀಲ ತಿಳಿಸಿದ್ದಾರೆ.




