Belagavi NewsBelgaum NewsKannada NewsKarnataka News

*ಬಸ್ ನಿಲ್ದಾಣದಲ್ಲೇ ಮಹಿಳೆಯ ಸರ ಕಳ್ಳತನ: ಕಣ್ಣಿರಿಟ್ಟ ಮಹಿಳೆ, ಪೊಲೀಸರಿಂದ ತಲಾಶ್*

ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಬೈಲಹೊಂಗಲ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಸುಮಾರು 5.50 ಲಕ್ಷ ರೂ. ಮೌಲ್ಯದ 3.5 ತೊಲಿ ಬಂಗಾರದ ಆಭರಣ ಕಳ್ಳತನವಾಗಿರುವ ಘಟನೆ ನಡೆದಿದೆ.

ತಾಲೂಕಿನ ನನಗುಂಡಿಕೊಪ್ಪ ಗ್ರಾಮದ ಮಂಗಲಾ ಬಸಯ್ಯ ದೇಸಾಯಿ (35) ಬಂಗಾರ ಕಳೆದುಕೊಂಡವರು. ಅವರು ನನಗುಂಡಿಕೊಪ್ಪದಿಂದ ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಇಳಿದು, ಬಳಿಕ ಮರಕುಂಬಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಲು ಬೈಲಹೊಂಗಲ–ಯರಗಟ್ಟಿ ಬಸ್ ಹತ್ತಿದ್ದರು. ಬಸ್ ಹತ್ತಿದ ಕೆಲವೇ ಕ್ಷಣಗಳಲ್ಲಿ ಕೊರಳನ್ನು ಗಮನಿಸಿದಾಗ ಬಂಗಾರದ ಆಭರಣ ಕಾಣೆಯಾಗಿರುವುದು ಗೊತ್ತಾಗಿದೆ.

Home add -Advt

ಆಭರಣ ಕಳುವಾಗಿರುವುದು ತಿಳಿಯುತ್ತಿದ್ದಂತೆ ಮಂಗಲಾ ಅವರು ಆತಂಕಗೊಂಡು ಕಣ್ಣೀರಿಡುತ್ತಾ ಚೀರಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಂಬಂಧಿಸಿದ ಬಸ್‌ನ್ನು ಪ್ರಯಾಣಿಕರ ಸಮೇತ ಬೈಲಹೊಂಗಲ ಪೊಲೀಸ್ ಠಾಣೆಗೆ ಕರೆತಂದು ಪರಿಶೀಲನೆ ನಡೆಸಿದರು. 

ಬಸ್‌ನಲ್ಲಿದ್ದ ಮಹಿಳೆಯರು, ಪುರುಷರು ಸೇರಿದಂತೆ 80ಕ್ಕೂ ಹೆಚ್ಚು ಪ್ರಯಾಣಿಕರನ್ನು ಪೊಲೀಸರು ತಪಾಸಣೆ ನಡೆಸಿದರೂ ಆಭರಣ ಪತ್ತೆಯಾಗಲಿಲ್ಲ. ಬಳಿಕ ಬಸ್‌ನ್ನು ಪ್ರಯಾಣ ಮುಂದುವರಿಸಲು ಕಳುಹಿಸಲಾಯಿತು.

ಈ ನಡುವೆ ಬಂಗಾರ ಕಳ್ಳತನ ಮಾಡಿದವರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಬಸ್ ನಿಲ್ದಾಣದ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button