
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಿದ್ಧತೆಗಳು ಆರಂಭವಾಗಿದೆ. ಈ ನಡುವೆ ರಾಜ್ಯ ಸರ್ಕಾರ ದಸರಾ ಕ್ಯಾಪ್ಟನ್ ಕಿಂಗ್ ಅಭಿಮನ್ಯು ಆನೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಮೈಸೂರು ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ನಿಶಾನೆಯಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
ಮೈಸೂರು ದಸರಾ ಮಹತ್ಸವದಲ್ಲಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಅಭಿಮನ್ಯು ಆನೆ ಈ ಬಾರಿ ನಿವೃತ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯು ತಾಯಿ ಚಾಮುಂಡಿ ದೇವಿ ವಿರಾಜಮಾನವಾಗುವ ಚಿನ್ನದ ಅಂಬಾರಿ ಹೊರುವುದಿಲ್ಲ. ಅಂಬಾರಿ ಹೊರಲು ಬೇರೆ ಆನೆ ಆಯ್ಕೆ ಮಾಡಲಾಗುತ್ತಿದೆ. ಅಭಿಮನ್ಯು ದಸರಾದಲ್ಲಿಯೂ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿತ್ತು. ಆದರೆ ಅಭಿಮನ್ಯು ಆನೆ ಅಭಿಮಾನಿಗಳ ಒತ್ತಾಸೆ ಮೇರೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಭಿಮನ್ಯು ಆನೆಯನ್ನು ದಸರಾ ಮೆರವಣಿಗೆಯಲ್ಲಿ ನಿಶಾನೆಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಈ ಬಾರಿಯ ದಸರಾದಲ್ಲಿ ಪಟ್ಟದ ಆನೆ ಮತ್ತು ನಿಶಾನೆ ಆನೆಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೈಸೂರು ರಾಜಮನೆತನದ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಪಟ್ಟದ ಆನೆಯಾಗಿ ಶ್ರೀಕಂಠ ಮತ್ತು ನಿಶಾನೆ ಆನೆಯಾಗಿ ಏಕಲವ್ಯ ಆನೆಯನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ.
ಶ್ರೀಕಂಠ ಆನೆಯು ಕಳೆದ ಬಾರಿಯೂ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸಿತ್ತು. ಈ ಬಾರಿಯೂ, ಎರಡನೇ ಬಾರಿಗೆ ಪಟ್ಟದ ಆನೆಯಾಗಿ ಆಯ್ಕೆಯಾಗಿರುವುದು ವಿಶೇಷ. ಭವ್ಯ ನಡಿಗೆ ಮತ್ತು ಗಾಂಭೀರ್ಯದಿಂದ ಶ್ರೀಕಂಠ ಗಮನ ಸೆಳೆಯುತ್ತಿದೆ. ಇದರ ಜೊತೆಗೆ, ಏಕಲವ್ಯ ಆನೆಯು ನಿಶಾನೆ ಆನೆಯಾಗಿ ಶ್ರೀಕಂಠನಿಗೆ ಸಾಥ್ ನೀಡಲಿದೆ. ದಸರಾ ಉತ್ಸವದಲ್ಲಿ ಈ ಆನೆಗಳು ಸಾಂಪ್ರದಾಯಿಕ ಮೆರವಣಿಗೆ ಮತ್ತು ಧಾರ್ಮಿಕ ವಿಧಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ



