Kannada NewsKarnataka NewsPolitics

*ಯಾವುದೇ ಕೆರೆ ಒತ್ತುವರಿ ಆದ್ರೆ ಕ್ರಿಮಿನಲ್ ಮೊಕದ್ದಮೆ ಫಿಕ್ಸ್: ಸಚಿವ ಈಶ್ವರ ಖಂಡ್ರೆ* 

ಪ್ರಗತಿವಾಹಿನಿ ಸುದ್ದಿ: ಗ್ರಾಮಪಂಚಾಯತಿಗೆ ಸೇರಿದ ಮತ್ತು ನಿರ್ವಹಿಸುತ್ತಿರುವ ಯಾವುದೇ ಕೆರೆಯನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

Home add -Advt

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ದೇಶದಲ್ಲೇ 2ನೇ ಅತಿ ಹೆಚ್ಚು ಬರಡು ಭೂಮಿ ಇರುವ ರಾಜ್ಯವಾಗಿದ್ದು, ಗ್ರಾಮೀಣ ಕುಡಿಯುವ ನೀರು ಪೂರೈಕೆ ದೊಡ್ಡ ಸವಾಲಾಗಿದೆ. ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಮೇಲೈ ಜಲ ಮೂಲಗಳನ್ನು ರಕ್ಷಿಸದಿದ್ದರೆ ಮುಂದೆ ನೀರಿಗೆ ಹಾಹಾಕಾರ ಎದುರಾಗಲಿದೆ ಎಂದರು.

ಜಲಶಕ್ತಿ ಸಚಿವಾಲಯ ದೆಹಲಿಯಲ್ಲಿ ಆಯೋಜಿಸಿದ್ದ 2 ದಿನಗಳ ಸುಸ್ಥಿರ ಜಲ ಕುರಿತ ಇಲಾಖಾ ಶೃಂಗಸಭೆಯಲ್ಲಿ ನಾನು ಭಾಗಿಯಾಗಿ, ಪ್ರಧಾನಿಯವರ ಸಮ್ಮುಖದಲ್ಲಿ ರಾಜ್ಯ ಸರ್ಕಾರ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದ್ದಾಗಿ ಹೇಳಿದರು.

ರಾಜ್ಯದ ಬಹುತೇಕ ಕಡೆ ಭೂಮಿಯೊಳಗೆ ಹೆಬ್ಬಂಡೆಗಳು ಮತ್ತು ಲ್ಯಾಟರೈಟ್ ಇರುವ ಕಾರಣ ಮಳೆಯ ನೀರು ಇಂಗದೆ ಅಂತರ್ಜಲ ಕುಸಿಯುತ್ತಿದೆ. ಅತಿಯಾದ ಅಂತರ್ಜಲ ಬಳಕೆಯಿಂದಲೂ ಭೂಮಿಯೊಳಗಿನ ಜಲ ಮಟ್ಟ ಕುಸಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೇಲೆ ಜಲ ಮೂಲಗಳೇ ಜೀವನಾಧಾರವಾಗಿದ್ದು, ನಾವು ಕೆರೆ, ಕಟ್ಟೆ, ಸರೋವರ, ನದಿಗಳನ್ನು ಸಂರಕ್ಷಿಸದಿದ್ದರೆ ಜಲಕ್ಷಾಮವೇ ಎದುರಾಗುತ್ತದೆ ಎಂದರು.

ಇಡೀ ಭೂಮಿಯ ಸುತ್ತ ನೀರಿದೆ. ಆದರೆ ಕುಡಿಯುವ ನೀರು ಇರುವುದು ಶೇ.3ರಷ್ಟು ಮಾತ್ರ. ಹೀಗಾಗಿ ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿಯೇ ನಾನು ಶೃಂಗ ಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿಯವರ ಸಮ್ಮುಖದಲ್ಲೇ ಕೆರೆ, ಸರೋವರ, ನದಿಗಳ ನೀರು ತ್ಯಾಜ್ಯ ಸೇರ್ಪಡೆಯಿಂದ ಕಲುಷಿತಗೊಳ್ಳದಂತೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ರಾಷ್ಟ್ರೀಯ ಯೋಜನೆ ರೂಪಿಸಲು ಒತ್ತಾಯಿಸಿದ್ದೇನೆ ಎಂದರು.

ರಾಜ್ಯದ 26,589 ಹಳ್ಳಿಗಳಲ್ಲಿ 4 ಕೋಟಿ 45 ಲಕ್ಷ ಜನರು ವಾಸಿಸುತ್ತಿದ್ದಾರೆ. ಅಂದರೆ ರಾಜ್ಯದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿದ್ದಾರೆ. ಇವರೆಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದ್ದು, ಸರ್ಕಾರ ಮುಂದಿನ 30 ವರ್ಷಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡು ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುತ್ತಿದೆ, ಮೇಲ್ಮ ಜಲದ ಗುಣಮಟ್ಟ ಪರೀಕ್ಷೆಗೆ 1.51 ಲಕ್ಷ ಮಹಿಳೆಯರಿಗೆ ತರಬೇತಿ ನೀಡಿದ್ದು ಅವರಿಗೆ ಕ್ಷೇತ್ರೀಯ ಪರೀಕ್ಷಾ ಕಿಟ್ ನೀಡಲಾಗಿದೆ ಎಂದರು.

ರಾಜ್ಯದ ಗ್ರಾ.ಪಂ. ವ್ಯಾಪ್ತಿಯಲ್ಲಿ 32504 ಕೆರೆಗಳಿದ್ದು 11498 ಕೆರೆ ಒತ್ತುವರಿ ಆಗಿತ್ತು. ಈ ಪೈಕಿ 6670 ಕೆರೆ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ 4828 ಕೆರೆಗಳ 11671 ಎಕರೆ ಒತ್ತುವರಿ ತೆರವು ಮಾಡಬೇಕಿದೆ. ಕೂಡಲೇ ಕೆರೆ ಒತ್ತುವರಿ ತೆರೆವಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಯಾರೇ ಹೊಸದಾಗಿ ಕೆರೆ ಒತ್ತುವರಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.

ಇಡೀ ದೇಶದಲ್ಲಿ ವಾಟರ್ ಬಜೆಟಿಂಗ್ ಮಾಡಿದ ಪ್ರಥಮ ರಾಜ್ಯ ಕರ್ನಾಟಕವಾಗಿದೆ. ಇದರಿಂದ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಆ ಪ್ರದೇಶದ ನೀರಿನ ಹಾಲಿ ಬೇಡಿಕೆ, ಭವಿಷ್ಯದ ಬೇಡಿಕೆ ಲೆಕ್ಕಹಾಕಿ ಸಮತೋಲಿತವಾಗಿ ನೀರು ಪೂರೈಕೆಗೆ ವೈಜ್ಞಾನಿಕ ಹಾಗೂ ವ್ಯವಸ್ಥಿತ ಯೋಜನೆ ರೂಪಿಸಲು ಸಹಕಾರಿಯಾಗಿದೆ ಎಂದರು.

ರಾಜ್ಯದ 268 ಹಳ್ಳಿಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ತಂದಿದ್ದು, ಇದರಿಂದಾಗಿ ಶೇ.7ರಷ್ಟು ಕುಡಿಯುವ ನೀರಿನ ಹಾಗೂ ಶೇ.12 ರಷ್ಟು ನೀರು ಪಂಪ್ ಮಾಡುವ ವಿದ್ಯುತ್ ಅವಧಿಯ ಉಳಿತಾಯವಾಗಿದೆ ಎಂದರು.

ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನದಡಿ ಡಿಸ್ಟ್ರಿಕ್ಟ್ ಫೆಡರಲ್ ಕೌಂಟ್ ಮಾಡಿ ಜಿಲ್ಲೆಯಲ್ಲಿ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಇದು ರಾಜ್ಯದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂಬ ವಿಷಯವನ್ನೂ ನಾನು ಶೃಂಗಸಭೆಯಲ್ಲಿ ತಿಳಿಸಿದ್ದೇನೆ ಎಂದರು.

Related Articles

Back to top button