*ಇಂದಿರಾ ಗಾಂಧಿ ಶಾಲೆ ಶಿಕ್ಷಕಿಯರಿಗೆ ಮಹತ್ವದ ಅಭಯ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಇಂದಿರಾಗಾಂಧಿ ಅವರ ಹೆಸರಿರುವ ಶಾಲೆ ಮುಚ್ಚಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದಾಗ ಮನವಿ ನೀಡಲು ಬಂದಿದ್ದ ಶಿಕ್ಷಕಿಯರು ಮುಖ್ಯಮಂತ್ರಿಯವರ ಕೈ ಹಿಡಿದು ಭಾವುಕರಾದರು.
ಕೂಡ್ಲಿಗಿಯಲ್ಲಿ ಶನಿವಾರ ನಡೆದ ಪ್ರಜಾಸೇವೆ ಅಭಿಯಾನದ ಮೊದಲ ಕಾರ್ಯಕ್ರಮ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಶಾಲೆಯ ಶಿಕ್ಷಕಿಯರಾದ ಶಾಂತಾ, ಜಗನ್ಮಾಥೆ, ಭಾರತಿ, ವೆಂಕಟೇಶ್ ಅವರುಗಳು ಸಿಎಂಗೆ ಮನವಿ ನೀಡಿ, “ಸಿಎಂ ಸಾರ್ ಹಗರಿಬೊಮ್ಮನಹಳ್ಳಿ, ರಾಮನಗರದಲ್ಲಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ನಡೆಯುತ್ತಿರುವ ಏಕೈಕ ಅನುದಾನಿತ ಪ್ರೌಢಶಾಲೆ ಇದಾಗಿದೆ. 169 ಜನ ಬಾಲಕಿಯರು ಓದುತ್ತಿದ್ದಾರೆ” ಎಂದರು.
ಸಿಎಂ ಕೂಡಲೇ ಜಿಲ್ಲಾ ಪಂಚಾಯತಿ ಸಿಇಓ ಕರೆದು “ಈ ಶಾಲೆಯ ಉಳಿವಿಗೆ ಏನು ಅಗತ್ಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿ” ಎಂದು ಸೂಚಿಸಿದರು.
ತಾಯವ್ವನಹಳ್ಳಿಯ ಮಂಗಳ ಅವರು, “ಸಾರ್ ನಾವು ಉಳುಮೆ ಮಾಡುತ್ತಿರುವ ಭೂಮಿಗೆ, ವಾಸದಲ್ಲಿ ಇರುವ ಮನೆಗೆ ಹಕ್ಕುಪತ್ರ ಮಾಡಿಸಿಕೊಡಿ. ಎಷ್ಟೋ ವರ್ಷಗಳಿಂದ ನಾವು ವಾಸವಿದ್ದೇವೆ” ಎಂದಾಗ “ಉಳುವವನಿಗೆ ಭೂಮಿ ಕೊಟ್ಟ ಪಕ್ಷ ನಮ್ಮದು. ಇನ್ನು ಹಕ್ಕುಪತ್ರ ನೀಡುವುದಿಲ್ಲವೇ? ಜನಸಾಮಾನ್ಯರ ಪರವಾಗಿ ನಮ್ಮ ಸರ್ಕಾರವಿದೆ” ಎಂದು ಕೂಡ್ಲಿಗಿ ತಹಶಿಲ್ದಾರ್ ನೇತ್ರಾವತಿ ಅವರನ್ನು ಕರೆದು ಅವರ ಸಮಸ್ಯೆ ಒಂದೆರಡು ದಿನಗಳಲ್ಲಿ ಬಗೆಹರಿಸಿ ಎಂದು ಸೂಚಿಸಿದರು.
ಲಂಬಾಣಿ ತಾಂಡಾದ ರುದ್ರಿಬಾಯಿ ಅವರು “ವ್ಯವಸಾಯಕ್ಕೆ ಜಮೀನು ನೀಡಿ” ಎಂದು ಮನವಿ ಸಲ್ಲಿಸಿದರು. ಸಿ ಬಿ ನಾಗೇಶ್ ಎಂಬುವರು ಕೂಡ್ಲಿಗಿ ತಾಲೂಕಿನಲ್ಲಿ ಕೆರೆಗಳನ್ನು ಅಕ್ರಮವಾಗಿ ನುಂಗಿ ಹಾಕುತ್ತಿದ್ದಾರೆ. ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ದೂರು ನೀಡಿದರು.
ಸರ್ಕಾರದಿಂದ ನಿಮಗೆ ಮನೆ ಹಂಚಿಕೆ
ಮನವಿ ನೀಡಲು ಬಂದಿದ್ದ ಕಾನಮಡುಗು ಗ್ರಾಮದ ತೃತೀಯ ಲಿಂಗಿಗಳಾದ ಮಂಜಮ್ಮ ಜೋಗತಿ, ಪ್ರಗತಿ ಅವರು ಮುಖ್ಯಮಂತ್ರಿಗಳಿಗೆ ಒಳಿತಾಗಲಿ ಎಂದು ದೃಷ್ಟಿ ತೆಗೆದರು. ನಂತರ ನಮಗೆ ಮನೆ ಕೊಡಿ, ವ್ಯವಸಾಯ ಮಾಡಲು ಭೂಮಿ ಕೊಡಿ ಎನ್ನುವ ಮನವಿಗೆ ಮುಖ್ಯಮಂತ್ರಿಯವರು, “ರಾಜ್ಯಕ್ಕೆ ಒಳಿತಾಗಲಿ ಎಂದು ಬೇಡಿಕೊಳ್ಳಿ ಹಾಗೂ ನಿಮಗೆ ಮನೆ ನೀಡುವ ಜವಾಬ್ದಾರಿ ನಮ್ಮದು. ಪ್ರತಿ ಜಿಲ್ಲೆಯಲ್ಲೂ 50 ಸಾವಿರ ನಿವೇಶನವನ್ನು ರಹಿತರಿಗೆ ಸೈಟ್ ಹಂಚಲಾಗುತ್ತದೆ. ನಿಮಗೆ ಮನೆ ಸಿಗುತ್ತದೆ” ಎಂದು ಭರವಸೆ ನೀಡಿದರು.
ವೆಂಕಟೇಶ್ ಅವರು ಕೂಡ್ಲಿಗಿಯಲ್ಲಿ ಬೋವಿ ಸಮುದಾಯ ಭವನ ಬೇಕು ಎಂದು ಮನವಿ ನೀಡಿದರೆ. ವೆಂಕಟೇಶ್ ನಾಯ್ಕ ಅವರು ಒಳಮೀಸಲಾತಿ ಬದಲು ಹಿಂದಿನ ವ್ಯವಸ್ಥೆಯನ್ನೇ ಮುಂದುವರೆಸಿ ಎಂದು ಮನವಿ ಮಾಡಿದರು. ದಲಿತ ರಕ್ಷಣಾ ವೇದಿಕೆಯವರು ರಾಯಚೂರಿನಲ್ಲಿ ನಡೆದಿರುವ ದಲಿತರ ಹತ್ಯೆಗಳು ನಡೆಯದಂತೆ ಕಾನೂನು ಕ್ರಮ ತೆಗೆದುಕೊಳ್ಳಿ” ಎಂದು ಮನವಿ ಮಾಡಿದರು.
ಸ್ಕೂಲಿಗೆ ಹೋಗಬೇಕು; ಚೆನ್ನಾಗಿ ಓದಬೇಕು
ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ವೇಳೆ ಕಾರ್ಡನ್ನು ವಿದ್ಯಾರ್ಥಿಗಳಿಂದ ಪಡೆದು ಪರಿಶೀಲನೆ ಮಾಡಿದರು. “ಸರಿಯಾಗಿ ಸ್ಕೂಲಿಗೆ ಹೋಗಬೇಕು. ಚೆನ್ನಾಗಿ ಓದಬೇಕು” ಎಂದು ತಲೆ ನೇವರಿಸಿದರು.
ರಾಜ್ಯದಾದ್ಯಂತ ವಿವಿದೆಡೆ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿತ್ತು. ಇದನ್ನು ನೇರಪ್ರಸಾರದ ಮೂಲಕ ವೀಕ್ಷಣೆ ಮಾಡುತ್ತಿದ್ದ ಸಿಎಂ ಕಾರ್ಯಕ್ರಮ ಉದ್ಘಾಟನೆಯ ನಂತರ ವಿಡಿಯೋ ಕಾನ್ಪರೆನ್ಸ್ ಮೂಲಕ ಡಿಸಿಎಂ ಡಾ ಜಿ ಪರಮೇಶ್ವರ್, ಸಚಿವರಾದ ಸಂತೋಷ್ ಲಾಡ್, ಎಸ್ ಎಸ್ ಮಲ್ಲಿಕಾರ್ಜುನ, ಶಿವಲಿಂಗೇಗೌಡರು ಅವರೊಟ್ಟಿಗೆ ಸಂವಾದ ನಡೆಸಿದರು.
“ಪ್ರಜಾಸೇವೆ ಕಾರ್ಯಕ್ರಮ ನಿಗದಿಯಾದ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬಾರದು. ತಪ್ಪಿಸಿಕೊಳ್ಳಬಾರದು, ಜಿಲ್ಲೆ, ತಾಲ್ಲೂಕು ನಂತರ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಒಮ್ಮೆ ಅರ್ಜಿ ಕೊಟ್ಟವರು ಮರಳಿ ಸಮಸ್ಯೆ ಹೇಳಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಬಾರದು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು” ಎಂದು ಸಲಹೆ, ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮೊದಲು ಸಾರ್ವಜನಿಕರ ಅರ್ಜಿಗಳನ್ನು ಪಡೆಯುವ ಕೌಂಟರ್ ಗಳ ಬಳಿ ತೆರಳಿ ಪರಿಶೀಲನೆ ನಡೆಸಿದರು. ಗೃಹಲಕ್ಷ್ಮಿ ಅರ್ಜಿ ಪರಿಶೀಲನೆಯ ಕೌಂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪರಿಶೀಲನೆ ಮಾಡಿದರು. ನಮ್ಮ ರಾಜ್ಯದ ಮತದಾರರಿಗೆ ಮಾತ್ರ ನಮ್ಮ ಗ್ಯಾರಂಟಿ ಯೋಜನೆಗಳು ತಲುಪಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಹುಣಸೆ ಸರ, ಹುಣಸೆಕಾಯಿ ಹಾರ ಉಡುಗೊರೆ,
“ಕೂಡ್ಲಗಿ ಹುಣಸೆಯ ನಾಡು ಎಂದು ಹೆಸರಾಗಿದೆ. ಇದರ ಪ್ರತೀಕವಾಗಿ ಹುಣಸೆ ಬೀಜಗಳಿಂದ ತಯಾರಿಸಿದ ಹುಣಸೆ ಸರವನ್ನು ಅಭಿಮಾನಿಯೊಬ್ಬರು ನೀಡಿದರೆ, ವಿವಿಧ ಸಂಘಟನೆಗಳವರು ಹುಣಸೆಕಾಯಿ ಹಾರವನ್ನು ಸಿಎಂಗೆ ಹಾಕಿ ಅಭಿಮಾನ ಮೆರೆದರು.
“ಇದೇ ವೇಳೆ 65.20 ಕೋಟಿ ರೂಪಾಯಿ ಮೊತ್ತದ 27 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. 129.05 ಕೋಟಿ ರೂಪಾಯಿ ವೆಚ್ಚದ 63 ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.
32 ಪಂಚಾಯತಿ ಕೌಂಟರ್ ಗಳು; 28 ವಿವಿಧ ಇಲಾಖೆ, ಯೋಜನೆಗಳ ಕೌಂಟರ್ ಗಳು
ಜನರ ಸಮಸ್ಯೆಗಳನ್ನು ಆಲಿಸಲು, ಪ್ರಜಾಸೇವೆ ಅರ್ಜಿಗಳನ್ನು ಪಡೆಯಲು ಸುಮಾರು 25 ಪಂಚಾಯತಿಗಳ ಹಾಗೂ ವಿವಿಧ ಇಲಾಖೆಗಳ ಮತ್ತು ಗ್ಯಾರಂಟಿ ಯೋಜನೆಗಳನ್ನು ಸೇರಿ ಸುಮಾರು 60 ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. ಪ್ರತಿಯೊಂದು ಕೌಂಟರ್ ಗೂ ತೆರಳಿ ಯಾವ, ಯಾವ ಸಮಸ್ಯೆಗಳ ಕುರಿತು ಅರ್ಜಿಗಳು ಬಂದಿವೆ ಎಂದು ಖುದ್ದಾಗಿ ಪರಿಶೀಲನೆ ಮಾಡಿದರು.
“ಗುಡೇಕೋಟೆ, ಬಣವಿಕಲ್ಲು, ಅಪ್ಪಯ್ಯನಹಳ್ಳಿ, ಶಿವಪುರ, ರಾಮದುರ್ಗ, ಬಡೇಲಡಕು, ಜರ್ಮಲಿ, ಹುರುಳಿಹಾಳ, ಗಂಡಬೊಮ್ಮನಹಳ್ಳಿ, ಮಾಕನಡುಕು, ಗುಂಡುಮುಣುಗು, ಹೂಡೇಂ, ಪೂಜಾರಹಳ್ಳಿ, ಆಲೂರು, ಹೀರೆಕುಂಬಳಕುಂಟೆ, ಹೊಸಹಳ್ಳಿ, ಹೀರೆಹೆಗ್ಗಾಳ್, ಜುಮೋಬನಹಳ್ಳಿ, ಹಾರಕಬಾವಿ, ಮೊರಬ, ಚೌಡಾಪುರ, ಬೆಳ್ಳಗಟ್ಟ, ಕಕ್ಕುಪ್ಪಿ, ಸೂಲದಹಳ್ಳಿ ಪಂಚಾಯತಿಗಳ ಕೌಂಟರ್ ಗಳಿದ್ದವು.
“ಜಿಲ್ಲಾ ಚುನಾವಣಾ ಶಾಖೆ (SVEEP) ಕಂದಾಯ ಇಲಾಖೆ, ಜನಸ್ಪಂದನ (IPGRS) ವಿಶೇಷ ಚೇತನರ ಕಲ್ಯಾಣ ಇಲಾಖೆ, ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, KSDA, ಕೃಷಿ ಇಲಾಖೆ,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ದೇವರಾಜು ಅರಸು ಅಭಿವೃದ್ಧಿ ನಿಗಮ, ರೇಷ್ಮೆ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೀನುಗಾರಿಕೆ ಇಲಾಖೆ, ಆಯುಷ್ ಇಲಾಖೆ, ಅರಣ್ಯ ಇಲಾಖೆ, ಸ್ವಸಹಾಯ ಸಂಘಗಳು, ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆ, ಆರೋಗ್ಯ ಕೇಂದ್ರ, ವಿಬಿ ಜಿ ಗ್ರಾಮ್ ಜಿ, ಕೂಡ್ಲಗಿ ಪಟ್ಟಣ ಪಂಚಾಯಿತಿ, 01 ರಿಂದ 04 ನೇ ವಾರ್ಡ್, 05 ರಿಂದ 08 ನೇ ವಾರ್ಡ್, 09 ರಿಂದ 12 ನೇ ವಾರ್ಡ್ , 13 ರಿಂದ 16 ನೇ ವಾರ್ಡ್, 17 ರಿಂದ 20 ನೇ ವಾರ್ಡ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಕೌಂಟರ್ ತೆರೆಯಲಾಗಿತ್ತು.



