*ಪಾಲಿಕೆಯ ಮುಂದಿನ ಪರಿಷತ್ ಸಭೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರಕಾರ ಆಗಸ್ಟ್ 29 ರಂದು ಪಾಲಿಕೆಗೆ ಆದೇಶ ನೀಡಿದ್ದು, ಪಾಲಿಕೆಯ ಮುಂದಿನ ಪರಿಷತ್ ಸಭೆಯಲ್ಲಿ ಆದೇಶವನ್ನು ಅನುಷ್ಠಾನಗೊಳಿಸಲು ಪಾಲಿಕೆಯ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಹೊನಕೇರಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಪಾಲಿಕೆಯ ಆಯುಕ್ತ ಕಾರ್ತಿಕ ಅವರನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರು ರಾಜ್ಯ ಸರಕಾರದ ಆದೇಶ ಮತ್ತು ಅನುಷ್ಠಾನದ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.ಮುಖ್ಯಮಂತ್ರಿಗಳ ಕಚೇರಿಯ ಹಿರಿಯ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ನೀಡಿದ ಕೆಲವೊಂದು ಸಲಹೆಗಳ ಬಗ್ಗೆ ಕನ್ನಡ ಸಂಘಟನೆಗಳ ಮುಖಂಡರು ಆಯುಕ್ತರ ಗಮನ ಸೆಳೆದರು.
ಆಯುಕ್ತರು ನೀಡಿದ ಭರವಸೆಯಿಂದ ಸಮಾಧಾನ ವ್ಯಕ್ತಪಡಿಸಿದ ಕನ್ನಡ ಮುಖಂಡರು ಪಾಲಿಕೆಯ ಪರಿಷತ್ ಸಭೆ ನಿಗದಿಯಾದ ಕೂಡಲೇ ಮತ್ತೆ ಪಾಲಿಕೆಯ ಆಯುಕ್ತರನ್ನು ಭೇಟಿಯಾಗಲು ನಿರ್ಧರಿಸಿದರು.
ಮುಂದಿನ ವಾರ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ವಿವಿಧ ಹಂತಗಳಲ್ಲಿ ಚರ್ಚೆ ನಡೆಸಲು ತೀರ್ಮಾನಿಸಿದರು.




