*ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ಘಟಪ್ರಭಾ: “ಧಾರ್ಮಿಕ ಆಚರಣೆಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ. ಜಾತ್ರಾ ಮಹೋತ್ಸವಗಳಲ್ಲಿ ಪ್ರತಿಯೊಬ್ಬರೂ ಜಾತಿ, ಭೇದ-ಭಾವಗಳನ್ನು ಮರೆತು ಎಲ್ಲಾ ಜನಾಂಗದ ಜನರು ಸೇರಿ ಜಾತ್ರೆಯನ್ನು ಮಾಡುವುದರಿಂದ ನಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯದ ಅರಿವು ಮೂಡಿಸಿ ಭಾವೈಕ್ಯತೆಯ ಸಂಕೇತವನ್ನು ಸಾರೋಣ” ಎಂದು ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಅವರು ಕರೆ ನೀಡಿದರು.
ರವಿವಾರದಂದು ದುರದುಂಡಿ ಗ್ರಾಮದ ಶ್ರೀ ದುರದುಂಡೀಶ್ವರ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ, ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 25 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಗುರು ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಭಾವಿಮಠದ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠವು ದುರದುಂಡಿ ಗ್ರಾಮದೊಂದಿಗೂ ನಿಕಟ ಧಾರ್ಮಿಕ ಸಂಬಂಧವನ್ನು ಹೊಂದಿದೆ.
ದುರದುಂಡೀಶ್ವರರು ವಾಸಿಸಿ ಹೋದ ಪವಿತ್ರ ಪುಣ್ಯ ಭೂಮಿಯಾಗಿದ್ದು ಗ್ರಾಮಕ್ಕೆ ಆಗಮಿಸುವ ಪೂಜ್ಯ ಪೀಠಾಧೀಶರ ವಾಸ್ತವ್ಯಕ್ಕೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸುಂದರ ಕಟ್ಟಡವನ್ನು ನಿರ್ಮಿಸಿ ಸರ್ಕಾರಿ ಅನುದಾನವನ್ನು ವ್ಯರ್ಥ ಮಾಡದೆ, ಗ್ರಾಮಸ್ಥರು ಒಗ್ಗಟ್ಟಿನಿಂದ ಹೊಣೆಗಾರಿಕೆ ತೆಗೆದುಕೊಂಡು ಅತ್ಯಂತ ಜವಾಬ್ದಾರಿಯಿಂದ ಒಂದು ಶಾಶ್ವತ ಆಸ್ತಿಯನ್ನು ನಿರ್ಮಿಸಿ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠ ಅರಭಾವಿಮಠದ ಪೂಜ್ಯ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಕಡಕೋಳ ಶ್ರೀ ಕುಮಾರೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಹಂದಿಗುಂದ ಶ್ರೀ ಸಿದ್ದೇಶ್ವರ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಬೆಲ್ಲದ ಬಾಗೇವಾಡಿ ಶ್ರೀ ಮಹಾಂತೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಹಾಗೂ ಹುಕ್ಕೇರಿ ವಿರಕ್ತಮಠದ ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಪೃಥ್ವಿ ಕತ್ತಿ, ಸರ್ವೊತ್ತೊಮ ಜಾರಕಿಹೊಳಿ, ಎ. ಬಿ. ಪಟ್ಟಣಶೆಟ್ಟಿ, ರಾಮಣ್ಣ ಸಣ್ಣಲಗಮನ್ನವರ, ದುಂಡಪ್ಪ ನಿಂಗನ್ನವರ, ಮಹಾದೇವ ಮಾನ್ಯಾಪ್ಪಗೋಳ, ವಿರುಪಾಕ್ಷ ಬೆಳವಿ, ರೇವಣ್ಣ ಪೂಜೇರಿ ಸೇರಿದಂತೆ ಶ್ರೀಮಠದ ಅಪಾರ ಸಂಖ್ಯೆಯ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


