*MBBS ಸೀಟ್ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಗೆ ಲಕ್ಷ್ಮೀ ಹೆಬ್ಬಾಳಕರ್ರಿಂದ ಲ್ಯಾಪ್ಟಾಪ್, ಆರ್ಥಿಕ ನೆರವು*

ಬೆಳಗಾವಿ: ಮುತಗಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಪ್ಟೇಕರ್ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.99 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದು, ಎರಡು ವರ್ಷಗಳ ಹಿಂದೆ ‘ಲಕ್ಷ್ಮೀತಾಯಿ ಫೌಂಡೇಶನ್’ ವತಿಯಿಂದ ಸನ್ಮಾನಿಸಲ್ಪಟ್ಟಿದ್ದರು.
ಇದೀಗ ಸೃಷ್ಟಿ ಅವರು ಬಾಗಲಕೋಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ MBBS ಸೀಟ್ ಪಡೆದುಕೊಳ್ಳುವ ಮೂಲಕ ವೈದ್ಯೆಯಾಗುವ ತಮ್ಮ ಕನಸಿನತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಈ ಪ್ರತಿಭಾವಂತ ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಗುಣಮಟ್ಟದ ಲ್ಯಾಪ್ಟಾಪ್ ಹಾಗೂ ಆರ್ಥಿಕ ನೆರವನ್ನು ನೀಡಿದರು. ಸೃಷ್ಟಿಯ ಶೈಕ್ಷಣಿಕ ಸಾಧನೆ ಹಾಗೂ ವೈದ್ಯೆಯಾಗುವ ಗುರಿಗೆ ಅಗತ್ಯವಾದ ಬೆಂಬಲ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ನೆರವಾದರು.


ಇದೇ ಸಂದರ್ಭದಲ್ಲಿ ಮತ್ತೋರ್ವ ಉದಯೋನ್ಮುಖ ಪ್ರತಿಭೆ ರಂಜನಾ ಜಗದೀಶ್ ಕೌಜಲಗಿ ಅವರ ಸಾಧನೆಯನ್ನು ಗುರುತಿಸಿ, ಅವರ ಮುಂದಿನ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗುವಂತೆ ಲ್ಯಾಪ್ಟಾಪ್ ಹಸ್ತಾಂತರಿಸಿ ಶುಭ ಹಾರೈಸಲಾಯಿತು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರ ಉನ್ನತ ಶಿಕ್ಷಣದ ಕನಸುಗಳಿಗೆ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ದೊರೆತಾಗ ಅವರು ತಮ್ಮ ಗುರಿ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂಬ ಆಶಯದೊಂದಿಗೆ ಈ ನೆರವು ನೀಡಲಾಯಿತು.



