Kannada NewsKarnataka News
ಮೊದಲ ದಿನವೇ ಆಸ್ಪತ್ರೆಯಲ್ಲಿ ಕುಡುಕನ ದಾಂಧಲೆ

ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ – ಮದ್ಯ ಮಾರಾಟ ಆರಂಭವಾದ ಮೊದಲ ದಿನವೇ ಯಕ್ಸಂಬಾದಲ್ಲಿ ಕುಡುಕನೋರ್ವ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿನ ಉಪಕರಣಗಳನ್ನು ಧ್ವಂಸ ಮಾಡಿ ದಾಂದಲೆ ನಡೆಸಿದ್ದಾನೆ.
ಈ ಕುರಿತು ಯಕ್ಸಂಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಮನೇವಾಡಿಯ ಸಂಜೀವಕುಮಾರ ಎನ್ನುವಾತ ಕೈಗೆ ಗಾಯ ಮಾಡಿಕೊಂಡಿದ್ದ. ಆತನ ಚಿಕಿತ್ಸೆ ನಡೆಸುತ್ತಿದ್ದಾಗ ವೈದ್ಯ ಮಲ್ಲಿಕಾರ್ಜುನ ಪೂಗತ್ಯಾನಟ್ಟಿ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆಸ್ಪತ್ರೆಯ ಉಪಕರಣಗಳನ್ನು ಧ್ವಂಸ ಮಾಡಿ ದಾಂಧಲೆ ನಡೆಸಿದ್ದಾನೆ. ನರ್ಸ್ ಗಳಿಗೂ ಅವಾಚ್ಯ ಶಂಬ್ದಗಳಿಂದ ಬೈದಿದ್ದಾನೆ.
ಕ್ರಮ ಕೈಗೊಳ್ಳಲು ಬಂದ ಪೋಲಿಸರ ಕೈಯನ್ನು ಕಚ್ಚಿದ್ದಾನೆ. ಸದಲಗಾ ಪೋಲಿಸ್ ಠಾಣೆ (ಅಪರಾಧ ಸಂಖ್ಯೆ: 47/2020)ಯಲ್ಲಿ ಪ್ರಕರಣ ದಾಖಲಾಗಿದೆ. ಆತನಿಗೆ ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಆತಂಕಗೊಂಡಿರುವ ವೈದ್ಯಕೀಯ ಸಿಬ್ಬಂದಿ ರಕ್ಷಣೆ ಕೋರಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರಿಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ.
ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಇನ್ನೂ ಎಂತೆಂತಹ ಅನಾಹುತಗಳನ್ನು ನೋಡಬೇಕಾಗಿದೆಯೋ….



