ಲಾಕ್ ಡೌನ್ ಮುಕ್ತಾಯದ ಬಗ್ಗೆ ಸುಳಿವು ನೀಡಿದ ಸಚಿವ ಸಿ.ಟಿ ರವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ಡೌನ್ ನಿಯಮ ಸರಿಯಾಗಿ ಪಾಲಿಸದ ಜನರಿಂದ ಲಾಕ್ಡೌನ್ ಪದೇ ಪದೇ ವಿಸ್ತರಣೆಯಾಯಿತು. ಹೀಗಾಗಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ವಿತರಣೆ ಮಾಡಿ ಮಾತನಾಡಿದ ಸಚಿವರು, ಕೊರೊನಾ ಚೈನ್ ಬ್ರೇಕ್ ಮಾಡಲಿಕ್ಕೆ ಲಾಕ್ಡೌನ್ ಪ್ರಯೋಗ ಮಾಡಿದ್ದು, ಆದರೆ ಎಲ್ಲರೂ ಸರಿಯಾಗಿ ಲಾಕ್ಡೌನ್ ನಿಯಮ ಪಾಲನೆ ಮಾಡಲಿಲ್ಲ. ಲಾಕ್ಡೌನ್ ಪಾಲಿಸದ ಜನರಿಂದ ಲಾಕ್ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರನವರೆಗೆ ಬಡತನ ಇದೆ. ಹೀಗಾಗಿ ಲಾಕ್ಡೌನ್ ನಿರ್ಬಂಧ ತೆರವಿನ ಸೂಚನೆ ಸಿಕ್ಕಿದೆ ಎಂದು ಹೇಳುವ ಮೂಲಕ ಮೇ 17ರ ನಂತರ ಲಾಕ್ಡೌನ್ ತೆರವು ಸುಳಿವು ನೀಡಿದರು.
ನಮ್ಮ ರಾಜ್ಯದಲ್ಲಿ ಒಳ್ಳೆಯ ಪ್ರವಾಸಿ ತಾಣಗಳಿವೆ. ಆದರೆ ಕೊರೊನದಿಂದಾಗಿ ಪ್ರವಾಸಕ್ಕೆ ತೊಂದರೆಯಾಗಿದೆ. 6 ತಿಂಗಳಿನಿಂದ ಒಂದು ವರ್ಷ ನಮ್ಮ ಇಲಾಖೆ ಚೇತರಿಸಿಕೊವುದು ಕಷ್ಟ, ನನ್ನ ಬಳಿ ಇರುವ ಮೂರು ಇಲಾಖೆಗಳಿಗೂ ಸಾಕಷ್ಟು ಸಮಸ್ಯೆಯಾಗಿದೆ ಎಂದು ತಿಳಿಸಿದರು.




