
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತಿ ಅಪಹರಣಕ್ಕೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಇಬ್ಬರು ಮಡದಿಯರ ಪತಿ ಶಾಹಿದ್ ಷೇಕ್ ನನ್ನು ಪೊಲೀಸರು ರಕ್ಷಿಸಿದ್ದು, ಸುಪಾರಿ ನೀಡಿದ್ದ ಮೊದಲ ಪತ್ನಿ ರೋಮಾ ಷೇಕ್ ಸೇರಿದಂತೆ ಇನ್ನಿತರರಿಗಾಗಿ ಬಲೆ ಬೀಸಿದ್ದಾರೆ.
ಶಾಹಿದ್ಗೆ ಇಬ್ಬರು ಮಡದಿಯರು. ಮೊದಲನೇ ಮಡದಿ ರೋಮಾ ಷೇಕ್, ಎರಡನೇ ಪತ್ನಿ ರತ್ನಾ ಕಾತೂಮ್. ರೋಮಾ ಷೇಕ್ ಬಳಿಯಲ್ಲಿದ್ದ ಒಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿ ಎರಡನೇ ಪತ್ನಿ ರತ್ನಾಗೆ ನೀಡಿ ಶಾಹಿದ್ ಅಲ್ಲಿಯೇ ವಾಸವಾಗಿದ್ದ. ಇದರಿಂದ ಕೋಪಗೊಂಡ ರೋಮಾ, ತಮ್ಮನ ಸಹಾಯದಿಂದ ಹುಡುಗರನ್ನು ಬಿಟ್ಟು ಪತಿಯ ಅಪಹರಣಕ್ಕೆ ಸಂಚು ರೂಪಿಸಿದ್ದಳು.
ಪತಿಯನ್ನು ಅಪಹರಿಸಿ ರತ್ನಾಗೆ ಕರೆ ಮಾಡಿ ಹೆಚ್ಚು ಹಣ ಹಾಗೂ ಒಡವೆಗಳಿಗೆ ಬೇಡಿಕೆ ಇರಿಸಲು ರೋಮಾ ಆ್ಯಂಡ್ ಗ್ಯಾಂಗ್ ನಿರ್ಧರಿಸಿತ್ತು. ಪೂರ್ವ ನಿಯೋಜಿತವಾದ ಪ್ಲಾನ್ ನಂತೆ ಜೂನ್ 7ರಂದು ಎಂಇಐ ಲೇಔಟ್ ಬಳಿ ತರಕಾರಿ ಖರೀದಿಗೆ ಬಂದಿದ್ದ ಶಾಹಿದ್ ನನ್ನು ಅಪಹರಣ ಮಾಡಿ ಪರಾರಿಯಾಗಿದ್ದರು. ಪತಿಯ ಕಿಡ್ನಾಪ್ ಸುದ್ದಿ ತಿಳಿದ ರತ್ನಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಗಮಂಗಲ ತಾಲೂಕಿನ ಬಿ.ಜಿ.ಎಸ್. ಟೋಲ್ ಗೇಟ್ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಶಾಹಿದ್ ಷೇಕ್ ನನ್ನು ರಕ್ಷಣೆ ಮಾಡಿದ್ದಾರೆ. ಅಭಿಷೇಕ್ (26), ಭರತ್ (25), ಪ್ರಕಾಶ್ ಕೆ.ಪಿ. (22), ಚಲುವಮೂರ್ತಿ (22) ನಾಲ್ವರನ್ನು ಬಂಧಿಸಿದ್ದಾರೆ.