Kannada NewsLatest

ನಗರಸಭೆ ಮಾಜಿ ಅಧ್ಯಕ್ಷ ಖೋತವಾಲ ನಿಧನ: ಕಣ್ಣೀರಿನ ವಿದಾಯ ಹೇಳಿದ ಸಚಿವ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ನಗರಸಭೆ ಹಿರಿಯ ಸದಸ್ಯ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡ) ಅವರು ಅನಾರೋಗ್ಯದಿಂದ ರವಿವಾರದಂದು ನಿಧನರಾಗಿದ್ದಾರೆ.
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೋಕಾಕ ನಗರಸಭೆಗೆ ೬ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಅಂಜುಮನ್ ಇಸ್ಲಾಂ ಕಮಿಟಿ ಗೋಕಾಕ ಮತ್ತು ತಂಜೀಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಗ್ರಾಮ ದೇವತೆ ಜಾತ್ರಾ ಕಮಿಟಿ ಸದಸ್ಯರಾಗಿಯೂ ಜನಸೇವೆ ಮಾಡಿದ್ದಾರೆ. ಜಾರಕಿಹೊಳಿ ಸಹೋದರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತರಾಗಿದ್ದರು.
ಊರಿನ ಗೌಡ ಎಂದೇ ಖ್ಯಾತಿ ಪಡೆದಿದ್ದ ಎಸ್.ಎ ಖೊತವಾಲ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಖೋತವಾಲ ಅವರ ನಿಧನಕ್ಕೆ ಜಾರಕಿಹೊಳಿ ಸಹೋದರರು, ಬಿಜೆಪಿ ಪದಾಧಿಕಾರಿಗಳು ಹಾಗೂ ತಾಲೂಕಿನ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಸಂತಾಪ

ಬಾಲ್ಯ ಸ್ನೇಹಿತ, ಗೋಕಾಕ ನಗರ ಸಭೆಯ ಸದಸ್ಯ ಎಸ್. ಎ. ಕೊತ್ವಾಲ್ ಅನಾರೋಗ್ಯದಿಂದ ಭಾನುವಾರ ನಿಧನರಾದ ಹಿನ್ನೆಲೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕಾರ್ಯಾಲಯದಲ್ಲಿ ನಗರ ಸಭೆಯ ಸದಸ್ಯ ಎಸ್. ಎ. ಕೊತ್ವಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಹು ಅಂಗಾಗಗ ವೈಫಲ್ಯದಿಂದ ಬಳಲುತ್ತಿದ್ದ ಕೊತ್ವಾಲ್ ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗೋಕಾಕನಲ್ಲಿ ಕೊತ್ವಾಲ್ ಗೌಡರು ಎಂದೇ ಖ್ಯಾತಿ ಹೊಂದಿದ್ದರು. ಬಾಲ್ಯದಿಂದಲೂ ಕೊತ್ವಾಲ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಒಡನಾಡಿಗಳಾಗಿದ್ದರು. ರಮೇಶ್ ಜಾರಕಿಹೊಳಿ ಉತ್ತುಂಗಕ್ಕೇರಲು ಕೊತ್ವಾಲ್ ಶ್ರಮಿಸಿದ್ದರು. ಸತತ ೬ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆ ಆಗಿದ್ದ ಕೊತ್ವಾಲ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಇದೀಗ ಸ್ನೇಹಿತನ ಅಕಾಲಿಕ ನಿಧನದಿಂದ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಗೋಕಾಕ್ ನಗರಸಭೆಗೆ ಸತತ ಆರನೇ ಬಾರಿ ಆಯ್ಕೆ ಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಜಾತ್ಯಾತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ ಅಂಜುಮನ್ ಇಸ್ಲಾಂ ಸಮಿತಿ ಮತ್ತು ತಂಜೀಂ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷರಾಗಿ, ಊರದೇವತೆಯಾದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಆಚರಣೆ ಯ ಸಮಿತಿ ಸದಸ್ಯರಾಗಿ ಜಾತ್ರೆಯನ್ನು ಯಶಸ್ವಿಗೊಳಿಸುತ್ತಿದ್ದರು.
ಭಾ.ಜ.ಪ.ದ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ವಿಶೇಷ ಪ್ರೀತಿ ಮೂಡಿಸಿ ಮುಸ್ಲಿಂ ಸಮುದಾಯದ ಮತದಾರರು ಬಿಜೆಪಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ನನ್ನೊಂದಿಗೆ ನಿಂತು, ಜನಜಾಗೃತಿ ಮೂಡಿಸಿದ್ದ ಕೋತ್ವಾಲ್, ಅವಿರತವಾಗಿ ಕೊರೋನಾ ಹರಡುವಿಕೆಯ ವಿರುದ್ಧ ಹೋರಾಡಿದ್ದರು.
ಕೋತ್ವಾಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅವರ ಅಭಿಮಾನಿಗಳಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.

ಕಣ್ಣೀರಿನ ವಿದಾಯ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬಾಲ್ಯದ ಸ್ನೇಹಿತ ಹಾಗೂ ಗ್ರಾಮದೇವತೆ ಜಾತ್ರಾ ಕಮೀಟಿಯ ಮುಖಂಡ ಎಸ್ ಎ ಕೋತವಾಲ ಅವರ ಪಾರ್ಥಿವ ಶರೀರ ಹೊತ್ತ ಅಂಬ್ಯುಲೆನ್ಸ್‌ಗೆ ಪುಷ್ಪಸುರಿದು ಕಣ್ಣಿರು ಸುರಿಸಿ ಅಂತಿಮವಿದಾಯ ಹೇಳಿದರು.
ನಗರಸಭೆಯ ಹಿರಿಯ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಎಸ್ ಎ ಕೋತವಾಲ ಅವರು ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು ರವಿವಾರದಂದು ಸಂಜೆ ಮೃತಶರೀರ ನಗರಕ್ಕೆ ಆಗಮಿಸಿತು.
ನಗರದ ಬಸವೇಶ್ವರ ವೃತ್ತದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಪುಷ್ಪನಮನ ಸಲ್ಲಿಸಿದರು. ನಂತರ ನಗರದ ಈದ್ಗಾ ಮೈದಾನದ ಮುಂದೆ ಆಗಮಿಸಿದ ಅಂಬ್ಯುಲೆನ್ಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ನಗರಸಭೆ ಸದಸ್ಯರು, ಕೋತವಾಲ ಅವರ ಸ್ನೇಹಿತರು ಪುಷ್ಪನಮನ ಸಲ್ಲಿಸಿದರು.
ಮೃತ ಕೋತವಾಲ ಅವರ ಅಂತ್ಯಕ್ರಿಯೆ ನಗರದ ಕುಂಬಾರಗಲ್ಲಿಯ ಖಬರಸ್ತಾನದಲ್ಲಿ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಎಲ್ಲ ರಾಜಕೀಯ ನಾಯಕರುಗಳ ಪಕ್ಷ ಭೇದ ಮರೆತು ಭಾಗವಹಿಸಿ ಎಸ್ ಎ ಕೋತವಾಲ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ರಮೇಶ ಜಾರಕಿಹೊಳಿ ಅವರ ಬಾಲ್ಯದ ಸ್ನೇಹಿತ ಹಾಗೂ ಗ್ರಾಮದೇವತೆ ಜಾತ್ರಾ ಕಮೀಟಿಯ ಮುಖಂಡ ಎಸ್ ಎ ಕೋತವಾಲ ಅವರ ಪಾರ್ಥಿವ ಶರೀರ ಹೊತ್ತ ಅಂಬ್ಯುಲೆನ್ಸ್‌ಗೆ ಪುಷ್ಪಸುರಿದು ಕಣ್ಣಿರು ಸುರಿಸಿ ಅಂತಿಮವಿದಾಯ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button