
ಪ್ರಗತಿವಾಹಿನಿ ಸುದ್ದಿ : ವಿಳಾಸ ಕೇಳುವ ನೆಪದಲ್ಲಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಭೀಕರ ಘಟನೆ ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ನಡೆಸಿದೆ.
ಘಟನೆ ನಡೆದ 24 ಗಂಟೆಯಲ್ಲಿ ನರಸೀಪುರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಶೋರ್ (24), ಕಿರಣ್ (30) ಹಾಗೂ ರಿಯಾನ್ (39) ಬಂಧಿತ ಆರೋಪಿಗಳು.
ಸಂತ್ರಸ್ತ ಯುವತಿ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಕಳೆದ ಮೂರು ತಿಂಗಳಿಂದ ಟಿ. ನರಸೀಪುರದ ವಿವೇಕಾನಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಜೊತೆಗೆ ಸ್ಥಳೀಯ ಫಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಜುಲೈ 18ರಂದು ಸಂಜೆ ಮೈಸೂರಿನಲ್ಲಿ ನಡೆದ ಸ್ನೇಹಿತೆಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿ, ರಾತ್ರಿ 9.45ರ ಸುಮಾರಿಗೆ ಟಿ. ನರಸೀಪುರದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ಅಲ್ಲಿಂದ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ, ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಆಕೆಯನ್ನು ಬಲವಂತವಾಗಿ ಕಾರಿನೊಳಗೆ ಎಳೆದೊಯ್ದಿದ್ದಾರೆ.
ಬಳಿಕ ಸಂತ್ರಸ್ತೆಯನ್ನು ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಸಮೀಪದ ಲಾಡ್ಜ್ ಒಂದಕ್ಕೆ ಕರೆದೊಯ್ದ ಮೂವರೂ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕೃತ್ಯದ ಬಳಿಕ ಯುವತಿಯ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳು ಹಾಗೂ 5,000 ರೂಪಾಯಿ ನಗದನ್ನು ಕಸಿದುಕೊಂಡ ಆರೋಪಿಗಳು, ಆಕೆಯನ್ನು ಮನೆಯ ಸಮೀಪ ತಂದು ಬಿಟ್ಟು ಪರಾರಿಯಾಗಿದ್ದರು.
ಘಟನೆಯಿಂದ ಆಘಾತಕ್ಕೊಳಗಾದ ಯುವತಿ ನೀಡಿದ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



