Latest
ರಸ್ತೆಯಲ್ಲೇ ಬೈಕ್ ಸಮೇತ ಸುಟ್ಟು ಕರಕಲಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಬಿರುಗಾಳಿ ಸಹಿತ ಭಾರೀ ಮಳೆಗೆ ರಸ್ತೆ ಮಧ್ಯೆಯೇ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ಬೈಕ್ ಸವಾರನೊಬ್ಬ ಬೈಕ್ ಸಮೇತ ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಇಲ್ಲಿನ ಪಡ್ಪಿನಂಗಡಿ ಬಳಿ ಈ ದುರ್ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಉಮೇಶ್ ಎಂದು ಗುರುತಿಸಲಾಗಿದೆ. ಇವರು ಸುಳ್ಯದ ಮಂಡೆಕೋಲು ನಿವಾಸಿಯಾಗಿದ್ದಾರೆ.
ಉಮೇಶ್ ಅವರು ಬಳ್ಪದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ದನದ ಹಾಲು ಹಿಂಡುವುದಿದೆ ಎಂದು ಸಂಬಂಧಿಕರ ಮನೆಯಿಂದ ಮುಂಜಾನೆ 4.30ರ ಸುಮಾರಿಗೆ ಹೊರಟಿದ್ದಾರೆ. ಹೀಗೆ ಹೊರಟ ಉಮೇಶ್ ಅವರು ಕಂಬದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಗಮನಿಸದೇ ಅದರ ಮೇಲೆಯೇ ಬೈಕ್ ಚಲಿಸಿದ್ದಾರೆ.
ಪರಿಣಾಮ ಬೈಕಿಗೆ ವಿದ್ಯುತ್ ಪ್ರವಹಿಸಿ ಸವಾರ ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಸುಳ್ಯ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




