*22 ಅಡಿ ಎತ್ತರದ ಗಣೇಶ ಮೂರ್ತಿ ಬಿದ್ದು ದುರಂತ: ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಇನ್ನೇನು ಗೌರಿ-ಗಣೇಶ್ ಹಬ್ಬಕ್ಕೆ ದಿನಗಣೆ ಆರಂಭವಾಗಿದೆ. ಎಲ್ಲೆಡೆ ಗಣೇಶ ಮೂರ್ತಿ ತಯಾರಿ ಜೋರಾಗಿ ಸಾಗುತ್ತಿದೆ. ಈ ನಡುವೆ ಮಹಾರಾಅಷ್ಟ್ರದಲ್ಲಿ ದುರಂತವೊಂದು ಸಂಭವಿಸಿದೆ.
ಬೃಹತ್ ಗಣೇಶ ಮೂರ್ತಿಯನ್ನು ಸಾಗಿಸುವಾಗ ಗಣೇಶ ಮೂರ್ತಿ ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
ದಕ್ಷಿಣ ಮುಂಬೈನಲ್ಲಿ 22 ಅಡಿ ಎತ್ತರದ ‘ಭುಲೇಶ್ವರ ಚಾ ರಾಜ’ ಗಣೇಶ ಮೂರ್ತಿಯ ಆಗಮನ ಸಮಾರಂಭದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭುಲೇಶ್ವರದ ಜಯ್ ಅಂಬೆ ಚೌಕ್ನಲ್ಲಿರುವ ಕಬುತರ್ಖಾನಾ ಬಳಿಯ ಬಲರಾಮ್ ಮರ್ಚೆಂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ದುರ್ಘಟನೆ ಜರುಗಿದೆ. ಬೈಕುಲ್ಲಾದಿಂದ ಭುಲೇಶ್ವರಕ್ಕೆ ಕರೆದೊಯ್ಯುವಾಗ ವಿಗ್ರಹ ಬಿದ್ದಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಅಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರನ್ನು ಸಂಕೇತ್ ನೆವ್ಶೆ (33) ಹಾಗೂ ಬ್ರಿಜೇಶ್ ಹೇಮಂತ್ ಜೋಶಿ (30) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ವೈಭವ್ ಘೇನಂದ್ (38), ಪವನ್ ಚೌರಾಸಿಯಾ (25), ಲಾವಣ್ಯ ಗಣರ್ (5), ದಿವ್ಯಾ ಗಣರ್ (7) ಮತ್ತು ಕುನಾಲ್ ಕಾಶಿದ್ (26) ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




