Kannada NewsKarnataka NewsLatest

ಎರಡನೇ ಬಾರಿ ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್‌ಗಳ ವಿತರಣೆ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸುರಕ್ಷತೆಗಾಗಿ ಅರಭಾವಿ ಕ್ಷೇತ್ರದಲ್ಲಿ ಮತ್ತೆ ಎರಡನೇ ಬಾರಿಗೆ ಪ್ರತಿ ಮನೆ-ಮನೆಗಳಿಗೆ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಕೊರೋನಾ ಜಾಗತಿಕ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿರುವ ಪ್ರತಿ ಮನೆಗಳಿಗೆ ಮಾಸ್ಕ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡನೆಯ ಹಂತದಲ್ಲಿ ೨.೫೦ ಲಕ್ಷ ಮಾಸ್ಕ್‌ಗಳನ್ನು ೩೪ ಗ್ರಾಮ ಪಂಚಾಯತ, ೩ ಪಟ್ಟಣ ಪಂಚಾಯತ ಮತ್ತು ಮೂಡಲಗಿ ಪುರಸಭೆ ವ್ಯಾಪ್ತಿಗಳಲ್ಲಿ ಹಂಚಲು ಸೂಚಿಸಲಾಗಿದೆ. ಮೆಳವಂಕಿ, ಕೌಜಲಗಿ, ಯಾದವಾಡ, ಹಳ್ಳೂರ, ತುಕ್ಕಾನಟ್ಟಿ, ವಡೇರಹಟ್ಟಿ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಮಾಸ್ಕ್‌ಗಳನ್ನು ಹಂಚುತ್ತಿದ್ದು, ಪ್ರತಿ ಜಿಲ್ಲಾ ಪಂಚಾಯತ ಕ್ಷೇತ್ರ, ಪಟ್ಟಣ ಪಂಚಾಯತ ಮತ್ತು ಪುರಸಭೆಗಳಿಗೆ ತಲಾ ೨೫ ಸಾವಿರರಂತೆ ಮಾಸ್ಕ್‌ಗಳನ್ನು ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಜೊತೆಗೆ ಕೊರೋನಾ ವಾರಿಯರ‍್ಸ್‌ಗೂ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ನೀಡಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪ್ರತಿ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ಆರೋಗ್ಯ, ಕಂದಾಯ ಇಲಾಖೆಯ ಸಿಬ್ಬಂದಿಯವರ ಸುರಕ್ಷತೆಗಾಗಿ ಎನ್೯೫ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಫೇಸ್ ಸೀಲ್ಡ್‌ಗಳನ್ನು ನೀಡಲಾಗುತ್ತಿದೆ. ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ ಮತ್ತು ಪುರಸಭೆಗೆ ಫುಟ್ ಆಫರೇಟಿಂಗ್ ಸ್ಟ್ಯಾಂಡ್ ಮತ್ತು ೫ ಲೀ ಸ್ಯಾನಿಟೈಜರ್‌ನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮೆಳವಂಕಿ, ಬೆಟಗೇರಿ, ಕೌಜಲಗಿ, ಕುಲಗೋಡ, ಯಾದವಾಡ, ಭೈರನಟ್ಟಿ, ಮಸಗುಪ್ಪಿ, ತಳಕಟ್ನಾಳ, ಬಳೋಬಾಳ, ಕಲ್ಲೋಳಿ, ನಾಗನೂರ, ತುಕ್ಕಾನಟ್ಟಿ ಮತ್ತು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ೧೦ ಪಿಪಿಇ ಕಿಟ್, ಫುಟ್ ಆಫರೇಟಿಂಗ್ ಸ್ಟ್ಯಾಂಡ್, ೫ಲೀ ಸ್ಯಾನಿಟೈಜರ್, ೨ ಫಲ್ಸ್ ಆಕ್ಸಿಮೀಟರ್, ಥೆಟಸ್ಕೋಫ್, ತಲಾ ೫೦ ರಂತೆ ಸರ್ಜಿಕಲ್ ಮಾಸ್ಕ್ ಹಾಗೂ ಕ್ಯಾಪ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಗೋಕಾಕ ಸಾರ್ವಜನಿಕ ಆಸ್ಪತ್ರೆ, ಬಿ.ಸಿ.ಎಂ. ಹಾಸ್ಟೇಲ್, ಮಲ್ಲಾಪೂರ ಪಿಜಿ, ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಗಳ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಸೋಂಕಿತರಿಗೆ ಅಗತ್ಯವಿರುವ ಎಲ್ಲ ಅನುಕೂಲತೆಗಳನ್ನು ಮಾಡಿಕೊಡಲಾಗುತ್ತಿದೆ. ಅಲ್ಲದೇ ಸಿಸಿಸಿ ಗಳಲ್ಲಿ ಸೋಂಕಿತರಿಗೆ ಆಕ್ಷಿಜನ್ ಪೂರೈಕೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಕೊರೋನಾದಿಂದ ಯಾರೂ ದೃತಿಗೆಡಬಾರದು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು, ಹಸಿವು ಆಗದೇ ಇರುವುದು, ಮೂಗಿನ ವಾಸನೆ ಕಳೆದುಕೊಳ್ಳುವುದು, ನಾಲಿಗೆ ಋಚಿ ಕಳೆದುಕೊಳ್ಳುವುದು, ವಾಂತಿ ಬೇದಿ, ಕೈಕಾಲುಗಳಲ್ಲಿ ಶಕ್ತಿ ಹೀನತೆ ಮುಂತಾದ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಉಪಚಾರ ಪಡೆಯಬೇಕು. ಕೊರೋನಾ ಸೋಂಕಿಗೆ ಇದುವರೆಗೂ ಯಾವುದೇ ಔಷಧಿ ಲಭ್ಯವಾಗಿಲ್ಲ. ಈ ಸೋಂಕಿಗೆ ಔಷಧಿ ಸಿಗುವವರೆಗೂ ಕೊರೋನಾ ಜೀವನದ ಭಾಗವೆಂದು ಭಾವಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ, ಅಗತ್ಯವಿರುವ ಸುರಕ್ಷತಾ ಕ್ರಮಗಳೊಂದಿಗೆ ಹೆಜ್ಜೆ ಹಾಕಬೇಕು. ಕೊರೋನಾ ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬವನ್ನು ಕೀಳು ಮಟ್ಟದಿಂದ ನೋಡದೇ ಅವರನ್ನು ಮಾನಸಿಕವಾಗಿ ಬೆಂಬಲಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button