Kannada NewsKarnataka News

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಪ್ರಶಂಸನೀಯ : ಡಾ.ಬೆಣಚಿನಮರಡಿ

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ :  ಕಳೆದ ಆರು ತಿಂಗಳಿನಿಂದ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೋನಾ ವೈರಸ್‌ನಿಂದಾಗಿ ಜನರ ಕಷ್ಟ-ಕಾರ್ಪಣ್ಯಗಳನ್ನು ಮನಗಂಡು ಅವರಿಗೆ ಆಸರೆಯಾಗಿ ಆಪದ್ಭಾಂದವರಾಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಹೃದಯ ವೈಶಾಲ್ಯ ಇಡೀ ನಾಡಿಗೆ ಮಾದರಿಯಾಗಿದೆ ಎಂದು ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ ಶ್ಲಾಘಿಸಿದರು.

ಬಾಲಚಂದ್ರ ಜಾರಕಿಹೊಳಿ

ಇಲ್ಲಿಯ ಶಿವಬೋಧರಂಗ ಅರ್ಬನ್ ಸೊಸಾಯಿಟಿಯಲ್ಲಿ ಶನಿವಾರದಂದು ಕೊರೋನಾ ವಾರಿಯರ‍್ಸ್‌ಗೆ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರ ಸುರಕ್ಷತೆಗಾಗಿ ಕೊಡಮಾಡಿರುವ ಮಾಸ್ಕ್ ಮತ್ತು ಇತರೇ ಮೆಡಿಕಲ್ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿಶಿಷ್ಟ ಸೇವೆಗೈಯ್ಯುವ ಮೂಲಕ ಜನರ ಹೃದಯದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಸಾಮಾಜಿಕ ಕಳಕಳಿಯನ್ನು ಹೊಂದಿ ಮೊದಲಿನಿಂದಲೂ ಜನರ ನೋವುಗಳಿಗೆ ಸ್ಪಂದಿಸುತ್ತ ಅಪ್ರತಿಮ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು.
ಕೊರೋನಾದಂತಹ ಕ್ಲೀಷ್ಟಕರ ಸಂದರ್ಭದಲ್ಲಿ ಜನರ ಸುರಕ್ಷತೆಗಾಗಿ ಮತ್ತೊಮ್ಮೆ ಪ್ರತಿ ಮನೆ-ಮನೆಗೆ ಎರಡನೇ ಬಾರಿಗೆ ಮಾಸ್ಕ್‌ಗಳನ್ನು ವಿತರಿಸುತ್ತಿದ್ದಾರೆ. ಕೊರೋನಾ ಆರಂಭಿಕ ದಿನಗಳಲ್ಲಿ ಕ್ಷೇತ್ರದ ಎಲ್ಲ ಜನರಿಗೆ ೨.೫೦ ಲಕ್ಷ ಮಾಸ್ಕ್‌ಗಳು ಮತ್ತು ೮೬ ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುವ ಮೂಲಕ ರಾಜ್ಯ, ರಾಷ್ಟ್ರದಲ್ಲಿಯೇ ಮೊದಲಿಗರೆನಿಸಿಕೊಂಡಿರುವ ಇವರುಗಳ ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತಹಶೀಲ್ದಾರ ಡಿ.ಜೆ. ಮಹಾತ್, ಬಿಇಓ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ಬೆನ್ನಿಗಿರುವ ಸಹೋದರರಿಗಿಂತ ಹೆಚ್ಚಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೋನಾ ಸೋಂಕಿತರ ಆರೈಕೆಗಾಗಿ ಕಾಳಜಿ ತೋರುತ್ತಿರುವುದು ಜನರಿಗಿರುವ ಅವರ ಕಳಕಳಿ ಮನೋಭಾವನೆ ಎತ್ತಿ ತೋರಿಸುತ್ತದೆ. ಸೋಂಕಿತರೆಂದರೆ ಭಯಪಡುವ ಇಂದಿನ ದಿನಗಳಲ್ಲಿ ಅವರಿಗಾಗಿಯೇ ಕಿಟ್‌ಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಸೋಂಕಿತರಿಗೆ ದಿನನಿತ್ಯ ಉಪಯೋಗಿಸುವ ಎಲ್ಲ ವಸ್ತುಗಳು ಅದರಲ್ಲಿವೆ. ಗುಣಮಟ್ಟದ ಊಟೋಪಚಾರ, ಆಕ್ಸಿಜನ್ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣು ಹಂಪಲಗಳನ್ನು ಸಹ ಸೋಂಕಿತರಿಗೆ ದಿನನಿತ್ಯ ಪೂರೈಸುತ್ತಿದ್ದಾರೆ. ಇವರಂತಹ ಶಾಸಕರನ್ನು ಪಡೆದಿರುವುದು ನಿಮ್ಮೆಲ್ಲರ ಸುದೈವ ಎಂದು ಅವರು ಪ್ರಶಂಸಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಕೊರೋನಾ ವಿರುದ್ಧ ಹೋರಾಡಲು ನಾವೆಲ್ಲ ಸನ್ನದ್ಧರಾಗಬೇಕಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಪಣ ತೊಡಬೇಕಿದೆ. ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಿಷ್ಕೃತ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.
ಶಾಸಕರ ಆಪ್ತ ಸಹಾಯಕರಾದ ದಾಸಪ್ಪ ನಾಯಿಕ, ನಿಂಗಪ್ಪ ಕುರಬೇಟ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ, ಮುಖಂಡ ರವೀಂದ್ರ ಸೋನವಾಲ್ಕರ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಡಾ.ಎಸ್.ಎಸ್. ಪಾಟೀಲ, ಸುಭಾಸ ಸಣ್ಣಕ್ಕಿ, ಹುಸೇನಸಾಬ ಶೇಖ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ, ಹಣಮಂತ ಗುಡ್ಲಮನಿ, ಗಿರೀಶ ಢವಳೇಶ್ವರ, ತಿಪ್ಪಣ್ಣಾ ಕುರುಬಗಟ್ಟಿ, ಮಲಿಕಸಾಬ ಹುಣಶ್ಯಾಳ, ಪ್ರಶಾಂತ ನಿಡಗುಂದಿ, ಶ್ರೀಶೈಲ ಬಳಿಗಾರ, ಆನಂದ ಟಪಾಲ, ಸಿದ್ದು ಹಳ್ಳೂರ, ಬಸು ಝಂಡೇಕುರುಬರ, ಮಹಾದೇವ ಮುಕ್ಕುಂದ, ಮಹಾದೇವ ರಂಗಾಪೂರ, ಪುರಸಭೆಯ ಚಿದಾನಂದ ಮುಗಳಖೋಡ, ಪುರಸಭೆ ಸದಸ್ಯರು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಮತ್ತೀತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆಯ ಸಿಬ್ಬಂದಿಗಳಿಗೆ ಪೇಸ್ ಸೀಲ್ಡ್, ಎನ್೯೫ ಮಾಸ್ಕ್, ಸ್ಯಾನಿಟೈಜರ್‌ಗಳನ್ನು ವಿತರಿಸಲಾಯಿತು.
ಫೋಟೋ ಕ್ಯಾಪ್ಷನ್ : ಮೂಡಲಗಿ ೧ : ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೋನಾ ವಾರಿಯರ‍್ಸ್‌ಗೆ ಆರೋಗ್ಯ ಸುರಕ್ಷತೆಗಾಗಿ ಕೊಡಮಾಡಿರುವ ವಿವಿಧ ಸಲಕರಣಗಳನ್ನು ವಿತರಿಸಲಾಯಿತು. ಡಾ.ಆರ್.ಎಸ್. ಬೆಣಚಿನಮರಡಿ, ನಾಗಪ್ಪ ಶೇಖರಗೋಳ, ಬಿಇಓ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button