ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಭಾರತ ನಡೆಸಿರುವ ದಾಳಿಗೆ ವಿವಿಧ ರೀತಿಯ ಪ್ರತೀಕಾರಕ್ಕೆ ಪಾಕಿಸ್ತಾನ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಕ್ಷಣದಲ್ಲಿ ದುಷ್ಕೃತ್ಯ ನಡೆಸಲೂ ಪಾಕಿಸ್ತಾನ ಹಿಂಜರಿಯದಿರದು ಎನ್ನುವ ಕಾರಣಕ್ಕೆ ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಮಧ್ಯೆ ಭಾರತದ ಗಡಿ ಉಲ್ಲಂಘಿಸಿ ಒಳ ನುಸುಳಿದ್ದ ಮೂರು ಪಾಕಿಸ್ತಾನಿ ಯುದ್ದ ವಿಮಾನಗಳ ಪೈಕಿ ಒಂದನ್ನು (ಎಫ್ 16) ಭಾರತ ಈಗಾಗಲೆ ಹೊಡೆದುರುಳಿಸಿದೆ. ಭಾರತದ ಸರಕು ಸಾಗಣೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡ ಬೆನ್ನಲ್ಲೇ ಪಾಕಿಸ್ತಾನ ಒಳ ನುಸುಳಲು ಯತ್ನಿಸಿತ್ತು. ಪತನಗೊಂಡಿರುವ ವಿಮಾನ ಮಿಗ್ ವಿಮಾನವೋ, ಸರಕು ಸಾಗಣೆ ವಿಮಾನವೋ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಪಾಕಿಸ್ತಾನದ ಎರಡು ವಿಮಾನಗಳನ್ನು ಹಿಮ್ಮೆಟ್ಟಿಸಲಾಗಿದ್ದು, ಒಂದನ್ನು ಹೊಡೆದುರುಳಿಸಲಾಗಿದೆ. ಪೈಲಟ್ ಪ್ಯಾರಾಟ್ಯೂಟ್ ಸಹಾಯದಿಂದ ಹಾರಿಕೊಂಡಿದ್ದು, ಆತನಿಗಾಗಿ ಶೋಧ ನಡೆದಿದೆ.
ಭಾರತದ 2 ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದ್ದು, ಪೈಲಟ್ ನ್ನು ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಬಗ್ಗೆ ಭಾರತ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೇವಲ ಭಾರತದ ಸರಕು ಸಾಗಣೆ ವಿಮಾನ ಮಾತ್ರ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಮಾತ್ರ ಹೇಳಿದೆ.
ಒಟ್ಟಾರೆ, ಗಡಿಯಲ್ಲಿ ಹಾಗೂ ಎರಡೂ ದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಯಾವುದೇ ಕ್ಷಣದಲ್ಲಿ ಏನೂ ನಡೆಯಬಹುದೆನ್ನುವ ವಾತಾವರಣ ಸೃಷ್ಟಿಯಾಗಿದೆ.
ಭಾರತದ ಗಡಿ ಭಾಗದ ವಿಮಾನ ನಿಲ್ದಾಣಗಳಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.