ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಬಸವ ಕಾಲನಿಯ ಬಸವಣ್ಣ ದೇವರ ದೇವಸ್ಥಾನ ಸಮಿತಿ ವತಿಯಿಂದ ಮಾ.೪ ಹಾಗೂ ೫ ರಂದು ಶಿವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾ.೪ ರಂದು ಬೆಳಗ್ಗೆ ೭ಕ್ಕೆ ಮಹಾರುದ್ರಾಭಿಷೇಕ, ಲಲಿತಾ ಸಹಸ್ರ ನಾಮಾವಳಿ, ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೆಸ್ಸೆಸ್ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಅವರಿಂದ ವಿಶೇಷ ಉಪನ್ಯಾಸ ಹಾಗೂ ಎಂ.ಬಿ. ಗೌಡಪ್ಪನವರ ಮತ್ತು ಗುರುಕಾರುಣ್ಯ ನಾಟ್ಯಾಲಯದ ಪ್ರತೀಕ್ಷಾ ಹಿರೇಮಠ ಮತ್ತು ಸಂಗಡಿಗರಿಂದ ಸಾಂಸ್ಕೃತಿಕ ಕಾಯಕ್ರಮಗಳು ನಡೆಯಲಿವೆ. ನಿಲಜಿಯ ಅಲೌಕಿಕ ಜ್ಞಾನ ಮಂದಿರದ ಶಿವಾನಂದಮಹಾಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ.
ಮಾ.೫ ರಂದು ಬೆಳಗ್ಗೆ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದೊಂದಿಗೆ ಬಸವಕಾಲನಿಯಲ್ಲಿ ಪಲ್ಲಕ್ಕಿ ಉತ್ಸವ ಜರುಗುವುದು. ಮ. ೧೨ಕ್ಕೆ ಮಹಾಪ್ರಸಾದ ನಡೆಯಲಿದೆ. ಗದಗ ತೋಂಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿಜಿ, ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಜಿ, ಸಂಸದ ಸುರೇಶ ಅಂಗಡಿ, ಶಾಸಕರಾದ ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ, ವಿಪ ಸದಸ್ಯ ಮಹಾಂತೇಶ ಕವಟಗಿಮಠ, ನಗರ ಸೇವಕ ಮಹಾಂತೇಶ ಕಾಗತಿಕರ ಉಪಸ್ಥಿತರಿರುವರು ಎಂದು ಬಸವಣ್ಣ ದೇವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಐ. ಗಾಣಿಗೇರ ತಿಳಿಸಿದ್ದಾರೆ.