ಪ್ರಗತಿವಾಹಿನಿ ಸುದ್ದಿ, ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈಗ ಸುಮಲತಾ ಹೆಸರಿನ ನಾಲ್ವರು ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ ಮೂವರು ಸುಮಲತಾ ಹೆಸರಿನವರು ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಸುಮಲತಾ ಅಂಬರೀಷ್ ಸೇರಿ ಒಂದೇ ಹೆಸರಿನ ನಾಲ್ವರು ಕಣಕ್ಕಿಳಿದಂತಾಗಿದೆ.
ಕನಕಪುರದ ರಂಗನಾಥ ಬಡಾವಣೆಯ ದರ್ಶನ್ ಎಂಬವರ ಪತ್ನಿ, ಬೆಂಗಳೂರು ಸಾಧನ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ಟಿ.ಸುಮಲತಾ, ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿಯ ಗೊರವಿ ಗ್ರಾಮದ ಮಂಜೇಗೌಡ ಅವರ ಪತ್ನಿ ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಸಿದ್ದೇಗೌಡರ ಪತ್ನಿ ಸುಮಲತಾ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.
ಗೊಂದಲ ಹುಟ್ಟಿಸಲು ತಂತ್ರ?: ಸುಮಲತಾ ಅಂಬರೀಷ್ ಸ್ಪರ್ಧೆಯಿಂದ ಹಾಗೂ ಅವರಿಗೆ ಸಿಗುತ್ತಿರುವ ಬೆಂಬಲದಿಂದ ಕಂಗಾಲಾಗಿರುವ ಮೈತ್ರಿ ಪಕ್ಷಗಳು ಮತದಾರರಲ್ಲಿ ಗೊಂದಲ ಹುಟ್ಟಿಸಿ, ಸುಮಲತಾ ಅಂಬರೀಷ್ ಅವರಿಗೆ ಬೀಳಬಹುದಾದ ಮತಗಳನ್ನು ಒಡೆಯುವ ಉದ್ದೇಶದಿಂದಲೇ ಅದೇ ಹೆಸರಿನ ಮತ್ತೆ ಮೂವರನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಮಗ ನಿಖಿಲ್ ಸ್ಪರ್ಧೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂದು ಸುಮಲತಾ ಅವರ ವಿರುದ್ಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈಗ ಅದೇ ಹೆಸರಿನ ಹಲವನ್ನು ಕಣಕ್ಕಿಳಿಸಿರುವುದೂ ಅದರ ಒಂದು ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆಲ್ಲ ಶೇರ್ ಮಾಡಿ)