Kannada NewsKarnataka News

ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಲ್ಲ -ಪ್ರೊ.ಎಂ.ರಾಮಚಂದ್ರಗೌಡ

ಕಿತ್ತೂರು ಉತ್ಸವ ಬೆಳ್ಳಿಹಬ್ಬಕ್ಕೆ ತೆರೆ

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮ: ಇತಿಹಾಸದ ತಪ್ಪು ಸರಿಪಡಿಸುವ ಅಗತ್ಯವಿದೆ- ಪ್ರೊ.ಎಂ.ರಾಮಚಂದ್ರಗೌಡ ಪ್ರತಿಪಾದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ (ಕಿತ್ತೂರು): ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟಿಷರ ವಿರುದ್ಧ  ಹೋರಾಡಿದ್ದರು. ಆದರೆ ಇತಿಹಾಸದ ಪಾಠಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂಬ ತಪ್ಪು ಮಾಹಿತಿ ಇದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರು ಪ್ರತಿಪಾದಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕಿತ್ತೂರು ಉತ್ಸವ-2021 ರ ಸಮಾರೋಪದ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಕಿತ್ತೂರು ನಾಡಿನ ಜನರು ಸ್ವಾಭಿಮಾನಿಗಳು ಹಾಗೂ ದೇಶಪ್ರೇಮಿಗಳಾಗಿದ್ದಾರೆ. ಕಿತ್ತೂರು ಹಾಗೂ ಹಿರೇಬಾಗೇವಾಡಿ ಮಧ್ಯೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಎಲ್ಲರ ಗಮನಸೆಳೆಯುವ ಹಾಗೆ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಿತ್ತೂರಿನಲ್ಲಿ ಚೆನ್ನಮ್ಮ ಅಧ್ಯಯನ ಪೀಠ:
ಕಿತ್ತೂರಿನಲ್ಲಿ ಜಮೀನು ಹಾಗೂ ಅನುದಾನ ಒದಗಿಸಿದರೆ ಕಿತ್ತೂರಿನಲ್ಲಿ ಚೆನ್ನಮ್ಮ ಅಧ್ಯಯನ ಪೀಠ ಸೇರಿದಂತೆ ವಿವಿಧ ವಿಭಾಗಗಳನ್ನು ವಿಶ್ವವಿದ್ಯಾಲಯ ವತಿಯಿಂದ ಆರಂಭಿಸಲಾಗುವುದು ಎಂದು ಹೇಳಿದರು.
ಕಿತ್ತೂರು ರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಟ್ಟಿರುವ ಇತರರ ಬಗ್ಗೆ ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಲಿದೆ ಎಂದು ಪ್ರೊ. ಎಂ.ರಾಮಚಂದ್ರಗೌಡ ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು, ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ  ಚನ್ನಮ್ಮ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರು ಚೆನ್ನಮ್ಮ. ಬ್ರಿಟೀಷರ ವಿರುದ್ಧ ಮೊಟ್ಟಮೊದಲ ಹೋರಾಟ ನಡೆಸಿದ ಮಹಿಳೆ ಚೆನ್ನಮ್ಮ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಸಭಾ ಸದಸ್ಯ ‌ಈರಣ್ಣ ಕಡಾಡಿ, ಕಿತ್ತೂರು ಉತ್ಸವ ಸರಕಾರದ ಉತ್ಸವ ಅಲ್ಲ; ಜನರ ಉತ್ಸವ ಆಗಿದೆ ಎಂದರು.
ಚನ್ನಮ್ಮನ ಕೋಟೆಯ ಪ್ರತಿರೂಪವನ್ನು ನಿರ್ಮಿಸಲು ಸರಕಾರ ‌ಮುಂದಾಗಿದೆ. ಆದರೆ‌ ನಾಡಿನ‌ ಜನರಿಂದ ದೇಣಿಗೆ ಸಂಗ್ರಹಿಸಿ ಕೋಟೆ ನಿರ್ಮಿಸಬೇಕು. ಇದರಿಂದಾಗಿ ಇದು ನಮ್ಮ ಕೋಟೆ ಎಂಬ ಭಾವನೆ ಜನರಲ್ಲಿ ಬರಲಿದೆ ಎಂದು ಹೇಳಿದರು.
ಕಿತ್ತೂರು ಇತಿಹಾಸ, ಚೆನ್ನಮ್ಮನ ಹೋರಾಟದ ಬದುಕಿನ ಮೇಲೆ ಬೆಳಕುಚೆಲ್ಲುವ ಪುಸ್ತಕಗಳನ್ನು ಯುವ ಸಮಯದಾಯ ಓದಬೇಕು ಎಂದು ಈರಣ್ಣ ಕಡಾಡಿ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮಾತನಾಡಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಿತ್ತೂರು ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಆದ್ದರಿಂದ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಆಜಾದಿ ಕಾ ಅಮೃತ ‌ಮಹೋತ್ಸವ ಸಮಾರಂಭದ ವರ್ಚುವಲ್ ಉದ್ಘಾಟನಾ ಸಮಾರಂಭಕ್ಕೆ ಆಯ್ಕೆ ಮಾಡಿದ ಪ್ರಧಾನಮಂತ್ರಿಗಳಿಗೂ ಧನ್ಯವಾದ ಸಲ್ಲಿಸಿದರು.
ಕಿತ್ತೂರಿನ ಗಣ್ಯರು ಜನರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಉತ್ಸವ ಆಚರಿಸಿಕೊಂಡು ಬಂದಿರುವುದನ್ನು ಸ್ಮರಿಸಿದ ಶಾಸಕ ದೊಡ್ಡಗೌಡರ ಅವರು ಎಲ್ಲರಿಗೂ ಕೃತಜ್ಞತೆಯನ್ನು ಸಮರ್ಪಿಸಿದರು.
ವೀರಯೋಧ-ವಿಜಯೋತ್ಸವ ಸಮಿತಿ ಸದಸ್ಯರಿಗೆ ಸನ್ಮಾನ:
ವೀರಯೋಧ ಸುಬೇದಾರ್ ಪ್ರಕಾಶ ಕಲಗೌಡ ಪಾಟೀಲ ಅವರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬೇದಾರ್ ಅವರು, ಮೂವತ್ತು ಗುಂಡುಗಳು ದೇಹವನ್ನು ಹೊಕ್ಕಿದ್ದರೂ ಸಮುಪ್ರಜ್ಞೆಯಿಂದ ಬದುಕುಳಿದ ಸನ್ನಿವೇಶವನ್ನು ವಿವರಿಸಿದರು.
ಇಂತಹ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇಶಕ್ಕಾಗಿ ದುಡಿಯಬೇಕು. ಪ್ರತಿ ಕುಟುಂಬದ ಒಬ್ಬರಾದರೂ ಸೈನ್ಯ ಸೇರಬೇಕು. ಜಾತಿ-ಮತ ಪಂಥವನ್ನು ಮರೆತು ದೇಶರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಿತ್ತೂರು ಉತ್ಸವದ ಬೆಳ್ಳಿಹಬ್ಬ ಆಚರಿಸುತ್ತಿರುವ ಈ ಸಂದರ್ಭದಲ್ಲಿ 1957 ರಿಂದ 1997 ರವರೆಗೆ ಕಿತ್ತೂರು ವಿಜಯೋತ್ಸವವನ್ನು ಆಚರಿಸಿಕೊಂಡು ಬಂದ ವಿಜಯೋತ್ಸವ ಸಮಿತಿಯ ಅಂದಿನ ಪದಾಧಿಕಾರಿಗಳನ್ನು ಕೂಡ ಗಣ್ಯರು ಸನ್ಮಾನಿಸಿದರು.
ನಿಚ್ಚಣಿಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ  ಪಂಚಾಕ್ಷರಿ ಮಹಾಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಕಾದರವಳ್ಳಿಯ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿ, ಇಮ್ಮಡಿ ಬಸಪ್ಪ‌ಮೇದಾರ‌ ಕೇತೇಶ್ವರ ಮಠದ ಸ್ವಾಮೀಜಿ, ಅಥಣಿಯ ಕುಂಬಾರ ಗುರುಪೀಠದ ಸ್ವಾಮೀಜಿ ಅವರು ಸಾನಿಧ್ಯ‌ ವಹಿಸಿದ್ದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸುಬೇದಾರ ಪ್ರಕಾಶ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಈರಪ್ಪ ಉಳ್ಳಾಗಡ್ಡಿ, ಮುತ್ನಾಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ, ಸುನೀತಾ ದೇಸಾಯಿ ‌ಹಾಗೂ ಶೈಲಾ ಕೊಕ್ಕರಿ ಅವರು ಎರಡು‌ ದಿನಗಳ ಉತ್ಸವದಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಿದರು.
ಎರಡು‌ ದಿನಗಳ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಿತ್ತೂರು ಐತಿಹಾಸಿಕ ಮಹತ್ವ ಬಿಂಬಿಸುವ ಹತ್ತಾರು ವಿಷಯಗಳ ಕುರಿತ ಅರ್ಥಪೂರ್ಣ ವಿಚಾರಗೋಷ್ಠಿಗಳು ಜರುಗಿದವು.
ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಿತ್ತೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ಸವಿದರು.

ಕಿತ್ತೂರು -ಕರ್ನಾಟಕ ನಾಮಕರಣ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button