ಪ್ರಗತಿ ವಾಹಿನಿ ಸುದ್ದಿ, ಹೈದರಾಬಾದ್ –
ಸಾರ್ವಜನಿಕರ ತುರ್ತು ಸಹಾಯಕ್ಕಾಗಿ ೧೦೦ ಸಹಾಯವಾಣಿ ಸಂಖ್ಯೆಯನ್ನು ರೂಪಿಸಲಾಗಿದೆ. ಆದರೆ ತೆಲಂಗಾಣದ ಭೂಪನೊಬ್ಬ ಹೆಂಡತಿ ಮಟನ್ ಅಡುಗೆ ಮಾಡಿಲ್ಲ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಅದೂ ಒಂದೆರಡು ಬಾರಿಯಲ್ಲ, ಬರೋಬ್ಬರಿ ೬ ಬಾರಿ ಕರೆ ಮಾಡಿ ದೂರು ಹೇಳಿದ್ದಾನೆ. ಕಿರಿಕಿರಿಯಿಂದ ಬೇಸತ್ತ ಪೊಲೀಸರು, ವ್ಯಕ್ತಿಯ ಮೇಲೆ ದೂರು ದಾಖಲಿಸಿ ಲಾಕಪ್ಗೆ ಹಾಕಿದ್ದಾರೆ.
ನವೀನ್ ಎಂಬುವವ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಕಿರಿಕಿರಿ ನೀಡಿದ ಆರೋಪಿ. ನಲಗೊಂಡ ಜಿಲ್ಲೆಯ ಚೇರ್ಲ ಗ್ರಾಮದ ಈತ ಹೋಳಿಯ ದಿನ ಮಟನ್ ಅಡುಗೆ ಮಾಡುವಂತೆ ಹೆಂಡತಿಗೆ ಹೇಳಿ ಹೋಗಿದ್ದ. ಕಂಠ ಪೂರ್ತಿ ಕುಡಿದು ಮನೆಗೆ ಬಂದಾಗ ಹೆಂಡತಿ ಮಾಂಸದಡುಗೆ ಮಾಡಿಲ್ಲ ಎಂಬುದು ತಿಳಿದು ಕೋಪಗೊಂಡಿದ್ದಾನೆ.
ಹಬ್ಬದ ದಿನ ಮಾಂಸದಡುಗೆ ಮಾಡಲು ನಿರಾಕರಿಸಿದ ಪತ್ನಿಯ ವಿರುದ್ಧ ೧೦೦ಕ್ಕೆ ಕರೆ ಮಾಡಿ ದೂರು ನೀಡಿದ್ದಾನೆ. ಪದೇ ಪದೆ ಕರೆ ಮಾಡಿ ಅದೇ ದೂರು ನೀಡತೊಡಗಿದಾಗ ಪೊಲೀಸರೂ ಸಹಜವಾಗಿ ಕಿರಿಕಿರಿಗೆ ಒಳಗಾಗಿದ್ದಾರೆ.
ನವೀನ್ನನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ ೨೯೦ (ಸಾರ್ವಜನಿಕವಾಗಿ ಗದ್ದಲ ಎಬ್ಬಿಸುವ ನಡುವಳಿಕೆ) ಹಾಗೂ ೫೧೦ (ಮದ್ಯದ ಅಮಲಿನಲ್ಲಿ ಅಸಹಜ ನಡುವಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ