Kannada NewsKarnataka NewsLatest

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ 3ನೇ ಯಶಸ್ವಿ ಹೃದಯ ಕಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಯಶಸ್ಸಿನ ಗುರಿ ಮುಟ್ಟಿ, ಅಂಗಾಂಗಳ ಕಸಿಯಲ್ಲಿ ಸದಾ ಮುಂದಿದೆ. ಈಗ ಮೂರನೇ ಯಶಸ್ವಿ ಹೃದಯ ಕಸಿ ಮಾಡುವದರ ಮೂಲಕ  ಅವರ ಬಾಳಿಗೆ ಸಂಜೀವಿನಿಯಾಗಿದೆ.

೨೫ ವರ್ಷದ ಗೋವಾದ ವ್ಯಕ್ತಿಗೆ ಹೊಸ ಜೀವನ ನೀಡುವಲ್ಲಿ ಇಲ್ಲಿನ ವೈದ್ಯರ ತಂಡವು ಯಶಸ್ವಿಯಾಗಿದೆ.
ದೀರ್ಘಕಾಲಿನ ತರ್ಮಿನಲ್ ಹಾರ್ಟ ಫೆಲ್ಯೂರದಿಂದ ಬಳಲುತ್ತಿದ್ದ ಗೋವಾದ ಯುವಕನೋರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದರು ಅಲ್ಲದೇ ಸರಕಾರದ ಜೀವಸಾರ್ಥಕತೆಯಲ್ಲಿ ೨೦೧೮ರಲ್ಲಿ ಆಸ್ಪತ್ರೆಗೆ ಹೃದಯ ಕಸಿಗಾಗಿ ಹೆಸರು ನೊಂದಾಯಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಯಾವುದೇ ದಾನಿಗಳ ಹೃದಯವು ಇವರಿಗೆ ಹೊಂದುತ್ತಿರಲಿಲ್ಲ. ವೈದ್ಯರ ನಿಗಾದಲ್ಲಿ ನಿರಂತರ ಚಿಕಿತ್ಸೆಯಿಂದ ಹೃದಯವನ್ನು ನಿರ್ವಹಿಸುತ್ತಿದ್ದರು. ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳಗಾವಿಯ ವ್ಯಕ್ತಿಯ ರಕ್ತದ ಗುಂಪು ಎ+(ಎ ಪಾಸಿಟಿವ್) ಇದ್ದು, ರೋಗಿಯ ಮೆದುಳು ಕಾರ‍್ಯಸ್ಥಗಿತಗೊಳಿಸಿತು.

ತಡಮಾಡದ ವೈದ್ಯರು ಮೆದುಳು ಮೃತ ರೋಗಿಯ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ನಡೆಸಿ ಅಂಗಾಂಗ ದಾನಕ್ಕೆ ಒಪ್ಪಿಸಿದರು. ಹೃದಯಕ್ಕಾಗಿ ಕಾಯುತ್ತಿದ್ದ ಯುವಕನ ಕಾಯುವಿಕೆ ಅಲ್ಲಿಗೆ ಕೊನೆಗೊಂಡಿತು. ಹೃದಯ ಕಸಿ ಮಾಡಿಸಿಕೊಂಡ ಯುವಕ ಈಗ ಗುಣಮುಖನಾಗಿ ಹೊಸ ಹೃದಯದೊಂದಿಗೆ ಆಸ್ಪತ್ರೆಯಿಂದ ಮನೆಗೆ ತೆರಳಿದರು ಎಂದು ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಢಾನಾ ಅವರು ಹೇಳಿದರು.
ಹೃದಯ ಕಸಿ ಮಾಡಿಸಿಕೊಂಡ ಯುವಕನ ತಾಯಿಯು ಮಾತನಾಡಿ, ಹೃದಯ ಕಸಿ ಆದ ನಂತರ ಈಗ ಖುಷಿಯಿಂದ ನಡೆದಾಡುತ್ತಾನೆ, ಮೆಟ್ಟಿಲು ಹತ್ತುತ್ತಾನೆ ಸಂತೋಷದಿಂದ ಇರುವದನ್ನು ನೋಡಿ ಬಹಳ ಖುಷಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಯುವಕನಿಗೆ ಶುಭಾಷಯ ಕೋರಿ ಮಾತನಾಡಿದ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಜಾಗತಿಕ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ. ಮಾನವೀಯತೆ ಹಾಗೂ ನಿಸ್ವಾರ್ಥ ತತ್ವದಡಿ ಕೆಎಲ್‌ಇ ಸಂಸ್ಥೆಯು ಸೇವೆ ನೀಡುತ್ತಿದೆ. ಮೆಟ್ರೋ ನಗರಗಳಲ್ಲಿ ಹೃದಯ ಕಸಿಗೆ ಸುಮಾರು ೨೦ ರಿಂದ ೨೫ ಲಕ್ಷ ರೂ.ಗಳ ವೆಚ್ಚ ತಗಲುತ್ತದೆ. ಆದರೆ ನಮ್ಮ ಸಂಸ್ಥೆಯ ಆಸ್ಪತ್ರೆಯಲ್ಲಿ ಅದೇ ಶಸ್ತ್ರಚಿಕಿತ್ಸೆಗೆ ೧೦ ಲಕ್ಷ ರೂ.ಗಳಲ್ಲಿ ನೆರವೇರಿಸಲಾಗುತ್ತಿದೆ. ಅವಶ್ಯವಿರುವವರಿಗೆ ಸೇವೆ ನೀಡುವದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಢಾನಾ ಅವರು ಹೃದಯ ಕಸಿ ಒಂದು ಎಲ್ಲರನ್ನೊಳಗೊಂಡ ಬೃಹತ ತಂಡದ ಪ್ರಯತ್ನ. ಇದು ಹೃದಯರಕ್ತನಾಳದ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆ, ಹೃದಯ ಅರಿವಳಿಕೆ, ಹೃದ್ರೋಗ, ಇಂಟೆನ್ಸಿವಿಸ್ಟ್‌ಗಳು, ಕಸಿ ಸಂಯೋಜಕರು, ಪರ್ಫ್ಯೂಷನಿಸ್ಟ್‌ಗಳು, ಆಪರೇಷನ್ ರೂಮ್ ಮತ್ತು ಐಟಿಯು ನರ್ಸ್‌ಗಳು, ತಂತ್ರಜ್ಞರು, ಮೋಹನ ಪ್ರತಿಷ್ಠಾನ ಹಾಗೂ ಜೀವಸಾರ್ಥಕತೆ ಸೇರಿದಂತೆ ಎಲ್ಲರ ಶ್ರಮ ಇದರಲ್ಲಿ ಅಡಗಿದೆ ಎಂದು ತಿಳಿಸಿದರು.
ಹೃದಯ ದಾನ ಮಾಡಿದ ಕುಟುಂಬಕ್ಕೆ ಹಾಗೂ ಶಸ್ತ್ರಚಿಕಿತ್ಸಕರ ತಂಡಕ್ಕೆ ಹೃದಯ ಕಸಿ ಮಾಡಿಸಿಕೊಂಡ ಶಿವಂ ಅವರ ಕುಟುಂಬವು ಧನ್ಯವಾದಗಳನ್ನು ಅರ್ಪಿಸಿತು. ಸರಕಾರ ಗೋವಾ ಸರಕಾರವು (ಗೋವಾ ಮೆಡಿಕ್ಲೈಮ್) ಹೃದಯ ಕಸಿಗಾಗಿ ಧನಸಹಾಯ ನೀಡಿದೆ.
ಮಾನವೀಯತೆಯಿಂದ ಹೃದಯವನ್ನು ನಿಸ್ವಾರ್ಥದಿಂದ ತ್ಯಾಗ ಮಾಡಿ ಇನ್ನೊಬ ಯುವಕನ ಜೀವ ಉಳಿಸಿದ ಕುಟುಂಬದ ಕಾರ‍್ಯ ಹಾಗೂ ಯಶಸ್ವಿ ಹೃದಯ ಕಸಿ ಮಾಡಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಶ್ಲಾಘಿಸಿದ್ದಾರೆ.

For English – https://pragativahini.in/kles-dr-prabhakar-kore-hospital-performs-third-successful-heart-transplant

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button