Kannada NewsLatest

ಬೆಳಗಾವಿಗೆ ಮಂಜೂರಾಗಿದ್ದ ಗ್ರಾಹಕರ ಆಯೋಗದ ಪೀಠ ಕಲಬುರ್ಗಿಯಲ್ಲಿ ಕಾರ್ಯಾರಂಭ; ರಾಜಕುಮಾರ್ ಟೋಪಣ್ಣವರ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗದ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಿರುವುದು ದುರ್ದೈವದ ಸಂಗತಿ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.

ಬೆಳಗಾವಿಗೆ ಯಾವುದೇ ಒಂದು ಸರಕಾರಿ ಯೋಜನೆ ಪಡೆಯಬೇಕೆಂದರೆ ಹೋರಾಟದ ಮೂಲಕವೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಎಟಿ ಪೀಠ ಸ್ಥಾಪನೆ ಮಾಡುವಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಳಾಂತರವಾಗುವಾಗಲು ಹೋರಾಟ, ಬೆಳಗಾವಿಗೆ ಏಮ್ಸ್ ಬರಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಇದರ ನಡುವೆಯೇ ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠ ಸ್ಥಾಪನೆ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಪ್ರಭಾವಿ ಸಚಿವ ಉಮೇಶ ಕತ್ತಿ ಅವರ ನಿರ್ಲಕ್ಷ ಧೋರಣೆಯೇ ಕಾರಣ ಎಂದು ಕಿಡಿಕಾರಿದ್ದಾರೆ.

Home add -Advt

ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದಾಗ ಬೆಳಗಾವಿ ಜನರನ್ನು ಸಂತೈಸಲು ಸರಕಾರ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗದ ಪೀಠ ಸ್ಥಾಪನೆ ಮಾಡಲು ಹಸಿರು ನಿಶಾನೆ ತೋರಿಸಿತು. ಇದು ಸಚಿವ ಉಮೇಶ ಕತ್ತಿ ಅವರ ಇಲಾಖೆಗೆ ಒಳಪಡುತ್ತಿರುವ ಹಿನ್ನೆಯಲ್ಲಿ ಜಿಲ್ಲೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು, ಬೆಳಗಾವಿ ಜಿಲ್ಲೆಯ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗದ ಪೀಠ ಸ್ಥಾಪನೆ ಮಾಡಲು ಜಾಗ ಗುರುತಿಸಲು ವಿಫಲವಾಗಿರುವುದರಿಂದ ಅದು ಕಲಬುರಗಿಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟೆ ಅಲ್ಲದೆ, ಬೆಳಗಾವಿಯ ಬಿಜೆಪಿ ಶಾಸಕರು ಬೆಳಗಾವಿಗೆ ಬರಬೇಕಿದ್ದ ಜಯದೇವ ಆಸ್ಪತ್ರೆಯನ್ನು ಧಾರವಾಡ ಜಿಲ್ಲೆಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಜನತೆ ಇದ್ದ ಸರಕಾರದ ಯೋಜನೆಯನ್ನು ಉಳಿಸಿಕೊಳ್ಳಬೇಕೋ ಅಥವಾ ಹೊಸ ಯೋಜನೆಗೆ ಹೋರಾಟ ಮಾಡಬೇಕೋ ಎನ್ನುವ ಗೊಂದಲದಲ್ಲಿದ್ದಾರೆ ಎಂದು ಟೋಪಣ್ಣವರ ತಿಳಿಸಿದ್ದಾರೆ.

ನೂತನ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಬಿ.ಎಸ್.ಪಾಟೀಲ್ ನೇಮಕ

Related Articles

Back to top button