Kannada NewsLatest

ಬೆಳಗಾವಿಯಲ್ಲಿ ಬಯಲಾಟಗಳ ರಂಗಾಯಣ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ರಂಗಭೂಮಿ ಚಟುವಟಿಕೆಗಳು ಬಹು ನಿಷ್ಕ್ರಿಯವಾಗಿವೆ. ರಂಗಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜನರ ದನಿಯಾಗಿ ರಂಗಭೂಮಿ ತನ್ನ ನಾಟಕಗಳ ಮೂಲಕ ಸಮಾಜವನ್ನು ಮತ್ತು ಪ್ರಭುತ್ವವನ್ನು ನಿರಂತರ ಎಚ್ಚರಿಸುವ ಕಾರ್ಯವನ್ನು ಮಾಡುತ್ತ ಬಂದಿದೆ ಎಂದು ಖ್ಯಾತ ನಾಟಕಕಾರ ಡಾ.ಡಿ.ಎಸ್. ಚೌಗಲೆ ಇಂದಿಲ್ಲಿ ನುಡಿದರು.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ” ನಾಟಕದ ಓದು-ರಚನೆ-ಅಭಿನಯ” ಕುರಿತು ವಿಶೇಷ ಉಪನ್ಯಾಸ ಮತ್ತು ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಕರಾವಳಿ ಮತ್ತು ಮಲೆನಾಡಿನಲ್ಲಿ ಯಕ್ಷಗಾನವು ಬದುಕಿನ‌ ಭಾಗವಾಗಿ ಈಗಲೂ ಜೀವಂತವಾಗಿದೆ. ಸಮಾಜವು ಅದನ್ನು ಕಾಪಿಟ್ಟುಕೊಂಡು ಬಂದಿದೆ. ಆದರೆ ಇದೇ ಜಿಲ್ಲೆಯಲ್ಲಿ ಹುಟ್ಟಿದ “ರಾಧಾನಾಟ”, “ಶ್ರೀಕೃಷ್ಣ ಪಾರಿಜಾತ”ದಂತಹ ಸಣ್ಣಾಟಗಳು ಸಮಾಜದ ಆಸರೆ ದೊರಕದೆ ಅನಾಥ ಪ್ರಜ್ಞೆಯಿಂದ ಅಳಿಯುವ ಅಂಚಿನಲ್ಲಿವೆ. ಅದಕ್ಕೆ ಸರಕಾರವು ಉಡುಪಿಯಲ್ಲಿ ಯಕ್ಷಗಾನ ರಂಗಾಯಣ ಮತ್ತು ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಸ್ಥಾಪಿಸಿದಂತೆ ಬೆಳಗಾವಿಯಲ್ಲಿ ಬಯಲಾಟಗಳ ರಂಗಾಯಣ ಸ್ಥಾಪಿಸಬೇಕು.ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮುಖ್ಯ ಮಂತ್ರಿಗಳ ಒತ್ತಡ ಹೇರಬೇಕೆಂದು ಕರೆ ನೀಡಿದರು. ಹಾಗೆಯೇ ರಾಣಿ ಚನ್ನಮ್ಮ ವಿದ್ಯಾಲಯವು “ನಾಟಕ ವಿಭಾಗ” ವನ್ನು ಪ್ರತಿಷ್ಠಾಪಿಸಬೇಕೆಂದು ವೇದಿಕೆಯಲ್ಲಿನ ಕುಲಸಚಿವರಲ್ಲಿ ಬಿನ್ನವಿಸಿದರು.

ಉದ್ಘಾಟಕರಾಗಿ ರಾ.ಚ.ವಿ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಅವರು ಆಗಮಿಸಿದ್ದರು.ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಶಂಕರ ತೇರದಾಳ ಅವರು ವಹಿಸಿದ್ದರು.

Home add -Advt

ಪ್ರೊ.ಹನುಮಂತಪ್ಪ ಸಂಜೀವನ್ನವರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಗ್ಲಿಷ್ ವಿಭಾಗದ ಡಾ.ಪೂಜಾ ಹಲ್ಯಾಳ ಪರಿಚಯಿಸಿದರು. ಹಿಂದಿ ವಿಭಾಗದ ಡಾ.ಸಂಜಯ ಕಾಂಬಳೆ ವಂದಿಸಿದರು.ಪ್ರೊ.ನಾರಾಯಣ ನಿರೂಪಿದರು.
ನಂತರ ಎರಡು ಗಂಟೆಗಳ ಕಾಲ ಡಾ.ಡಿ.ಎಸ್.ಚೌಗಲೆ ವಿಶೇಷ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮವನ್ನು ಕನ್ನಡ, ಇಂಗ್ಲೀಷ್, ಹಿಂದಿ ವಿಭಾಗಗಳು ಸೇರಿ ” ಭಾಷಾ ಸಂಗಮ” ಅಡಿಯಲ್ಲಿ ಆಯೋಜಿಸಿದ್ದವು.
2000 ರೂ ಲಂಚ: ಎಸಿಬಿ ಬಲೆಗೆ ಬಿದ್ದ ಎಫ್ ಡಿಸಿ

Related Articles

Back to top button