
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಆಧರಿಸಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2022 ರ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದ ಏಳನೇ ಆವೃತ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿ ತಾ ವಿ), ಬೆಳಗಾವಿ ರಾಷ್ಟ್ರದ ಅತ್ತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಕಳೆದ ಬಾರಿಗಿಂತ 7 ಸ್ಥಾನ ಮೇಲೇರಿ 49ನೇ ಸ್ಥಾನ ಪಡೆದುಕೊಂಡಿದೆ ಈ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಪಡೆದ ಸಂಸ್ಥೆಗಳಾದ ಐಐಟಿಗಳು, ಐಐಐಟಿಗಳು, ಎನ್ಐಟಿಗಳು ಮತ್ತು ಇತರೆ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ದೇಶದ ವಿಶ್ವವಿದ್ಯಾಲಯಗಳಿವೆ.
ಹಾಗೆಯೇ ಸಮಗ್ರ ಶಿಕ್ಷಣ ಸಂಸ್ಥೆ ವಿಭಾಗ(ಓವರ್ ಆಲ್ ಕೆಟಗರಿ)ದಲ್ಲಿ ಕಳೆದ ಬಾರಿ 101 – 150 ಶ್ರೇಯಾಂಕ ಬ್ಯಾಂಡ್ ನಲಿದ್ದ ವಿ ಟಿ ಯು ಈ ಬಾರಿ ತನ್ನ ಶ್ರೇಯಾಂಕದಲ್ಲಿ ಜಿಗಿತ ಕಂಡು ಶ್ರೇಷ್ಠ 100 ರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ವಿಟಿಯು ರಾಷ್ಟ್ರದ ಶ್ರೇಷ್ಟ 100 ವಿಶ್ವವಿದ್ಯಾಲಯಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿಯೂ 10 ಸ್ಥಾನಗಳ ಜಿಗಿತ ಕಂಡು 72ನೇ ಸ್ಥಾನವನ್ನು ಪಡೆದಿದೆ ಹಾಗೆಯೇ ಮ್ಯಾನೇಜ್ಮೆಂಟ್ ವಿಭಾಗದಲ್ಲಿಯೂ ವಿ.ತಾ.ವಿ 76 ನೇ ಸ್ಥಾನ ಪಡೆದಿದೆ.
ವಿಟಿಯು 24 ವರ್ಷಗಳಲ್ಲಿ ಸಂಬಂಧಪಟ್ಟ ಎಲ್ಲ ವಿಭಾಗಗಳಲ್ಲಿ ಶ್ರೇಷ್ಠ 100 ರಲ್ಲಿ ಸ್ಥಾನ ಪಡೆಯುದರ ಮುಖಾಂತರ ಅದ್ಭುತ ಸಾಧನೆ ಮಾಡಿದೆ. ಇದು ವಿ ಟಿ ಯು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟ ಶಿಕ್ಷಣದ ವ್ಯವಸ್ಥೆಯನ್ನು, ಯುವ ಪೀಳಿಗೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೈಗಾರಿಕ ವಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಕೆಲವು ಕ್ರಾಂತಿಕಾರಿ ಕ್ರಮಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ್ದನ್ನು ಪ್ರತಿಬಿಂಬಿಸುತ್ತದೆ.
ಈ ಎಲ್ಲ ಯೋಜನೆಗಳಿಂದ ಸತತ ಮೂರು ವರ್ಷಗಳಿಂದ ವಿ ಟಿ ಯು ಪ್ರತಿಷ್ಠಿತ ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆಯುತ್ತ ಬಂದಿದೆ ಹಾಗೂ ಈ ಬಾರಿ ಶ್ರೇಯಾಂಕದಲ್ಲಿ ಕಳೆದ ಬಾರಿಗಿಂತ ಜಿಗಿತಕಂಡು ಇಲ್ಲಿವರೆಗಿನ ಅತ್ಯುತ್ತಮ ಸ್ಥಾನವನ್ನೂ ಈ ಬಾರಿ ಪಡೆದುಕೊಂಡಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಮುಖಾಂತರ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾಲಯಗಳನ್ನು ಮತ್ತು ಸಂಸ್ಥೆಗಳನ್ನು ಅಲ್ಲಿಯ ಬೋಧನೆ, ಕಲಿಕೆ, ಸಂಪನ್ಮೂಲಗಳ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ; ಪದವಿ ಫಲಿತಾಂಶಗಳು, ಸಾಮಾಜಿಕ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಗಳ ಮೇಲಿರುವ ಸಾರ್ವಜನಿಕ ಗ್ರಹಿಕೆ. ಈ ಅಂಶಗಳ ಬಗ್ಗೆ ಅತ್ಯಂತ ಕಠಿಣವಾದ ಮಾನದಂಡಗಳೊಂದಿಗೆ ಮೌಲ್ಯಮಾಪನ ಮಾಡಿ ಈ ಶ್ರೇಯಾಂಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.
ವಿಟಿಯು ನ ಈ ಸಾಧನೆಗೆ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ವಿ ತಾ ವಿಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಹಾಗೂ ವಿ.ತಾ.ವಿ ರಜತ ಮಹೋತ್ಸವ ಸಂದರ್ಭದಲ್ಲಿನ ಈ ಸಾಧನೆ ಮತ್ತಷ್ಟು ಸಂತೋಷವನ್ನು ತಂದಿದೆ ಎಂದು ಹೇಳಿದರು.
ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ; ಸವಾಲು ಹಾಕಿದ ಭೈರತಿ ಸುರೇಶ್
ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಬೃಹತ್ ಜವಳಿ ಪಾರ್ಕ್