
ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೈತಪ್ಪಿಸಿದ್ದು ಸಚಿವ ಮುರುಗೇಶ್ ನಿರಾಣಿ ಎಂಬ ಸ್ವಾಮೀಜಿ ಆರೋಪಕ್ಕೆ ಕಿಡಿಕಾರಿರುವ ಸಚಿವ ನಿರಾಣಿ, ಮೀಸಲಾತಿ ಕೈತಪ್ಪಿಸಲು ನಾನು ಯಾರೊಂದಿಗೆ ಮಾತನಾಡಿದ್ದೇನೆ, ಯಾವ ಜಾಗದಲ್ಲಿ ಭಾಷಣವನ್ನು ಮಾಡಿದ್ದೇನೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾಬೀತು ಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ನಾನು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ತಪ್ಪಿಸಲೆಂದು ಇಂತಹ ನಾಯಕರೊಂದಿಗೆ ಮಾತನಾಡಿದ್ದೇನೆ, ಇಂಥಹ ಜಾಗದಲ್ಲಿ ಭಾಷಣ ಮಾಡಿದ್ದೇನೆ ಎಂಬುದನ್ನು ಸ್ವಾಮೀಜಿಗಳು ಸಾಕ್ಷಿ ತರಲಿ, ಸಾಬೀತು ಪಡಿಸಲಿ. ಸಾಬೀತು ಪಡಿಸಿದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ರಾಜಕೀಯ ನಿವೃತ್ತಿಯನ್ನು ಘೋಷಿಸುತ್ತೇನೆ. ಒಂದು ವೇಳೆ ಸಾಕ್ಷಿ ಕೊಡಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ಸ್ವಾಮೀಜಿ ರಾಜಕೀಯಕ್ಕೆ ಬರಲಿ ಎಂದು ಹೇಳಿದ್ದಾರೆ.
ಇದೇ ವೇಳೆ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಸಚಿವರು, ಬಾಯಿಚಪಲಕ್ಕೆ ಹೇಳಿಕೆ ಕೊಡುವುದಲ್ಲ. ಸರ್ಕಾರ ಕೆಡವುತ್ತೇವೆ. ಸರ್ಕಾರ ತರುತ್ತೇವೆ ಎಂದೆಲ್ಲ ಮಾತನಾಡುತ್ತಿದ್ದೀರಿ. ಇಂತಹ ಉದ್ಧಟತನದ ಮಾತು ಸಲ್ಲದು. ಒಂದು ಕಡೆ ಇದ್ದಾಗ ಒಂದು ಪಕ್ಷ ಬೈಯ್ಯುವುದು, ಹೊತ್ತು ಬಂದಾಗ ಛತ್ರಿ ಹಿಡಿಯುವುದು ನಿರಾಣಿ ಜಾಯಮಾನವಲ್ಲ, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಸಮಾಜಕ್ಕೆ ನಿಷ್ಠನಾಗಿರುತ್ತೇನೆ ಎಂದರು.
ಬಿಜೆಪಿಯಲ್ಲೀಯೇ ಶಾಸಕರಾಗಿದ್ದು, ಪಕ್ಷದ ವಿರುದ್ಧ, ನಾಯಕರ ವಿರುದ್ಧ ಸದಾ ವಾಗ್ದಾಳಿ ನಡೆಸುವ ಯತ್ನಾಳ್, ಇತ್ತೀಚೆಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರಾದ ಶೋಭಾಕರಂದ್ಲಾಜೆ ಅವರ ಕಾಲಿಗೆ ಬಿದ್ದು, ಯಡಿಯೂರಪ್ಪ ಜೊತೆ ರಾಜೀ ಮಾಡಿಸುವಂತೆ ಕೇಳಿದ್ದಾರೆ. ನಾನು ಟಿಕೆಟ್ ಗಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಪಕ್ಷದ ವಿರುದ್ಧ ಮಾತನಾಡಿಯೂ ಇಲ್ಲ. ಟಿಕೆಟ್ ಗಾಗಿ ಪರದಾಡುತ್ತಿರುವವರು ಇವರು ಎಂದು ಗುಡುಗಿದ್ದಾರೆ.
ನಾಳೆ ಹಿಂದೂ ಜಾಗರಣ ವೇದಿಕೆ 3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನ
https://pragati.taskdun.com/tomorrow-is-hindu-jagran-vedike-3rd-triennial-provincial-conference/