Kannada NewsKarnataka News

ಬೆಳಗಾವಿಯ ಮೂವರು ಸೇರಿ 18 ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ 18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ ಉಂಟಾಗಿದೆ. ವಯಸ್ಸಿನ ಕಾರಣ ಮತ್ತು ಕ್ಷೇತ್ರದಲ್ಲಿ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಕೆಲವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. ಭಾನುವಾರ ರಾತ್ರಿ ಅಥಾ ಸೋಮವಾರ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು ಇದರಲ್ಲಿ ಸುಮಾರು 75 -80 ಹಾಲಿ ಶಾಸಕರ ಹೆಸರು ಇರುವ ಸಾಧ್ಯತೆ ಇದೆ.

ವಯಸ್ಸಿನ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಮದುರ್ಗದ ಮಹಾದೇವಪ್ಪ ಯಾದವಾಡ, ಕಲಘಟಗಿಯ ಸಿ.ಎಂ. ನಿಂಬಣ್ಣವರ್ ಸೇರಿದಂತೆ ಕೆಲವರು ಟಿಕೆಟ್ ವಂಚಿತರಾಗುವ ಸಾಧ್ಯತೆ ಇದೆ. ಅನೇಕ ಶಾಸಕರಿಗೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಅವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡುವ ಚಿಂತನೆ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಹಾದೇವಪ್ಪ ಯಾದವಾಡ ಜೊತೆಗೆ ಅನಿಲ ಬೆನಕೆ ಮತ್ತು ಮಹೇಶ ಕುಮಟಳ್ಳಿಗೆ ಟಿಕೆಟ್ ತಪ್ಪಿಸಲಾಗುತ್ತದೆ ಎನ್ನುವ ಸುದ್ದಿ ಹರಡಿದೆ. ಆದರೆ ಬೆಳಗಾವಿ ಉತ್ತರದಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ಮುಂದುವರಿದಿದೆ. ಸೂಕ್ತ ಅಭ್ಯರ್ಥಿ ಸಿಗದಿದ್ದಲ್ಲಿ ಬೆನಕೆ ಅವರನ್ನೇ ಮುಂದುವರಿಸುವ ಸಾಧ್ಯತೆ ಇದೆ. ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಟಿಕೆಟ್ ಪಡೆದರೂ ಆಶ್ಚರ್ಯವಿಲ್ಲ. ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡುವ ಮೂಲಕ ಅವರು ಬಂಡಾಯವೇಳದಂತೆ ತಡೆಯುವ ಪ್ರಯತ್ನ ನಡೆದಿದೆ.

ಸವದತ್ತಿಯಲ್ಲಿ ವಿರೂಪಾಕ್ಷಿ ಮಾಮನಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ತಪ್ಪಿದರೆ ರತ್ನಾ ಮಾಮನಿ ಪಡೆಯಲಿದ್ದಾರೆ. ಹುಕ್ಕೇರಿಯಲ್ಲಿ ನಿಖಿಲ್ ಕತ್ತಿ, ಚಿಕ್ಕೋಡಿಯಲ್ಲಿ ಮಹಾಂತೇಶ ಕವಟಗಿಮಠ, ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ ಮುನ್ನೋಳಕರ್ ಮತ್ತು ಸಂಜಯ ಪಾಟೀಲ ಹೆಸರು ಮುಂಚೂಣಿಯಲ್ಲಿದೆ.

https://pragati.taskdun.com/bjp-candidate-listreleasetodayjagadish-shetter/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button