
ಪ್ರಗತಿವಾಹಿನಿ ಸುದ್ದಿ, ಶಿರಸಿ: ‘ಅಂಬೆಯೊಳಗಣ ಕುದಿವ ಕೆಂಡದ ಕಣ್ಣು’ ಎಂಬ ವಿಶಿಷ್ಟ, ವಿಶೇಷ ರಂಗ ಪ್ರಯೋಗ ತಾಲೂಕಿನ ಮುಂಡಿಗೇಸರ ದೇವಸ್ಥಾನದಲ್ಲಿ ಅನಾವರಣಗೊಂಡಿತು.
ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಅಂಬೆ ಕಥೆ ಆಧರಿಸಿದ ಏರ್ಪಡಿಸಿದ ಎರಡು ಪ್ರತ್ಯೇಕ ರಂಗ ಪ್ರಯೋಗಳು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.
ಒಂದು ತಾಳಮದ್ದಲೆ ಹಾಗೂ ಇನ್ನೊಂದು ನಾಟಕದ ಕಲಾ ಪ್ರಕಾರದ ಮೂಲಕ ಅಂಬೆಯ ತುಮಲ, ಸಂಕಷ್ಟ, ನೋವು ತೆರೆದಿಡುವಲ್ಲಿ ಯಶಸ್ವಿಯಾಯಿತು.
ಅಂಬಾ ಶಪಥ ತಾಳಮದ್ದಲೆಯ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ ಭಾಗವತಿಕೆಗೆ ಶಂಕರ ಭಾಗವತ ಯಲ್ಲಾಪುರ ಮದ್ದಲೆಯಲ್ಲಿ ವಿಘ್ನೇಶ್ವರ ಗೌಡ ಚಂಡೆಯಲ್ಲಿ ಸಾಥ್ ನೀಡಿದರು.
ಭೀಷ್ಮನಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ, ಅಂಬೆಯಾಗಿ ಮೋಹನ ಭಾಸ್ಕರ ಹೆಗಡೆ, ಪರಶುರಾಮನಾಗಿ ಎಂ.ಎನ್.ಹೆಗಡೆ ಹಳವಳ್ಳಿ ಒಂದು ಮುಕ್ಕಾಲು ತಾಸಿನಲ್ಲಿ ಅಂಬಾ ಶಪಥವನ್ನು ತೆರೆದಿಟ್ಟರು.
ಬಳಿಕ ಮಂಗಳೂರಿನ ನಂದಗೋಕುಲ ತಂಡದ ಶ್ವೇತಾ ಅರೆಹೊಳೆ ಅವರಿಂದ ‘ಗೆಲ್ಲಿಸಬೇಕು ಅವಳ’ ನಾಟಕ ಒಂದು ತಾಸಿನ ಅವಧಿಯಲ್ಲಿ ಮನೋಜ್ಞವಾಗಿ ಪ್ರದರ್ಶನ ಕಂಡಿತು. ಅಂಬೆಯ ತಳಮಲ, ಗೆಲ್ಲಿಸಬೇಕಿತ್ತು ಅವಳ, ಗೆಲ್ಲಿಸುತ್ತೇನೆ ಒಮ್ಮೆಯಾದರೂ ಎಂಬ ಆಶಯದೊಂದಿದೆ ಪ್ರದರ್ಶನ ಕಂಡಿತು. ನಾಟಕ ನೋಡಿದವರಿಗೆ ಅಂಬೆ ಗೆದ್ದಿದ್ದರೆ ಅನ್ನಿಸುವಂತೆ ಮನಕೆ ತಾಕಿತು.
ಈ ಕಥೆಯನ್ನು ಪ್ರಸಿದ್ಧ ಕಥೆಗಾರ್ತಿ ಸುಧಾ ಆಡುಕಳ ರಚಿಸಿದ್ದು, ರಂಗ ವಿನ್ಯಾಸ, ನಿರ್ದೇಶನವನ್ನು ರೋಹಿತ್ ಬೈಕಾಡಿ ನೀಡಿದರು. ರಂಗದ ಹಿಂದೆ ಪೃಥ್ವಿ ಎಸ್ ರಾವ್, ಚೈತ್ರಾ ಕೋಟ್ಯಾನ್, ಅಕ್ಷಿತ್ ನಂದಗೋಕುಲ, ಗೀತಾ ಅರೆಹೊಳೆ, ಸದಾಶಿವ ರಾವ್ ಇತರರು ಇದ್ದರು. ನಾಟಕದಲ್ಲೂ ಯಕ್ಷಗಾನದ ಸಾಧ್ಯತೆ ಬಳಸಿಕೊಂಡಿದ್ದು ಇಷ್ಟವಾಯಿತು. ಯುವ ಕಲಾವಿದೆ ಶ್ವೇತಾ ಅರೆಹೊಳೆ ಅಂಬೆಯ ಪಾತ್ರವನ್ನು ಮನೋಜ್ಞವಾಗಿ ಚಿತ್ರಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಗ್ರಾಮದ ಹಿರಿಯ ಎಂ.ಎನ್.ಹೆಗಡೆ ಬಳಗಂಡಿ, ಸಾಮಾಜಿಕ ಪ್ರಮುಖ ಪ್ರಮೋದ ಪಂಡಿತ್, ರವಿ ಹೆಗಡೆ,
ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಇತರರು ಚಂಡೆ ನುಡಿಸಿ ಚಾಲನೆ ನೀಡಿದರು.