Latest

*ರಾಜ್ಯದಲ್ಲಿ ಮೀಸಲಾತಿಯನ್ನು ಸಂಪೂರ್ಣ ರದ್ದುಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್*

ಪ್ರಗತಿವಾಹಿನಿ ಸುದ್ದಿ ಶಿರಸಿ: ‘ರಾಜಕೀಯ ಪ್ರಭಾವ ಗಟ್ಟಿಗೊಳಿಸಲು ಮೀಸಲಾತಿ ಹಂಚಿಕೆ ಮಾಡುವ ಬದಲು ಸಂಪೂರ್ಣ ಮೀಸಲಾತಿ ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
‘ಒಕ್ಕಲಿಗರು, ಪಂಚಮಸಾಲಿಗಳು, ಹೀಗೆ ಹತ್ತು ಹಲವು ಸಮುದಾಯಗಳು ಜನಸಂಖ್ಯಾ ಬಲ ಪ್ರದರ್ಶಿಸಿ ಮೀಸಲಾತಿಗೆ ಬೇಡಿಕೆ ಇಡುತ್ತಿವೆ. ಸರ್ಕಾರ ಮತಬ್ಯಾಂಕ್ ದೃಷ್ಟಿಯಿಂದ ಮೀಸಲಾತಿ ನೀಡುತ್ತಿದ್ದರೆ ಮೀಸಲಾತಿಯ ನಿಜ ಅರ್ಥ ಕಳೆದುಹೋಗುತ್ತದೆ’ ಎಂದು ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿಯುತ್ತಿದ್ದರೆ ಸಣ್ಣ ಸಮುದಾಯಗಳು ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತವಾಗುವ ಸಾಧ್ಯತೆ ಇದೆ. ಸರ್ಕಾರಕ್ಕೂ ಮೀಸಲಾತಿ ಹಂಚಿಕೆಗೆ ಸ್ಪಷ್ಟ ಮಾನದಂಡ ಇದ್ದಂತಿಲ್ಲ. ಹೀಗಾಗಿ ರಾಜಕೀಯ ಪ್ರಭಾವ ಬೀರುವ ಮತ್ತು ಜಾತಿಗಳ ನಡುವೆ ಸಂಘರ್ಷ ಹುಟ್ಟಿಸುವ ಮೀಸಲಾತಿಯನ್ನೇ ರದ್ದುಪಡಿಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟರು.
‘ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಶೇ.100ರಷ್ಟು ಮೀಸಲಾತಿಯನ್ನೇ ನಿಗದಿಪಡಿಸಬೇಕು‌. ಜಾತಿ, ಧರ್ಮದ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅವಕಾಶ ಒದಗಿಸಲಿ. ಈ ಸಂಬಂಧ ಸಂವಿಧಾನ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿ’ ಎಂದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button