
ಪ್ರಗತಿವಾಹಿನಿ ಸುದ್ದಿ, ಕಲಬುರಗಿ: ಈ ಭಾಗದಲ್ಲಿ ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರಿದ್ದರೂ ಈ ಭಾಗಕ್ಕೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ತೆಗೆದು ಹಾಕಲು ಸಾಧ್ಯವಾಗಿಲ್ಲ. ಬಿ.ಎಸ್ ಯಡಿಯೂರಪ್ಪನವರು ನಾಯಕತ್ವದಲ್ಲಿ 371 ಜೆ ಜಾರಿಗೆ ತರಲಾಗಿದೆ. ಅಪ್ಪುಗೌಡರು ಕಲ್ಬುರ್ಗಿಯ ಸಂಪೂರ್ಣ ಅಭಿವೃದ್ಧಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಕಲಬುರ್ಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೆಯ ಪಾಟೀಲ್ ರೇವೂರ (ಅಪ್ಪುಗೌಡ ಪಾಟೀಲ್) ಪರ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು. “ಇಂತಹ ಮಳೆಯಲ್ಲಿಯೂ ಇಷ್ಟೊಂದು ಜನರು ಸೇರಿರುವ ನಿಮ್ಮ ಉತ್ಸಾಹ ನೋಡಿದರೆ ಖುಷಿಯಾಗುತ್ತದೆ. ಅಪ್ಪುಗೌಡರು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ” ಎಂದು ಬೊಮ್ಮಾಯಿ ಹೇಳಿದರು.
“ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಪ್ಪುಗೌಡರು ಇಡೀ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹತ್ತು ವರ್ಷದಲ್ಲಿ ಅಪ್ಪುಗೌಡರು ಕಲಬುರ್ಗಿ ಸಂಪೂರ್ಣ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಒಂದು ಸಾವಿರ ಕೋಟಿ ರೂ. ಮೀಸಲಿಡುತ್ತಿದ್ದರು. ಆದರೆ, ಕೇವಲ 300 ಕೋಟಿ ಮಾತ್ರ ಖರ್ಚಾಗುತ್ತಿತ್ತು. ನಾವು ಬಂದ ಮೇಲೆ ಕಲಬುರ್ಗಿ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ ನೀಡಿದ್ದೇವೆ ಎಂದರು. ಕಳೆದ ವರ್ಷ 3 ಸಾವಿರ ಕೋಟಿ ಕೊಟ್ಟಿದ್ದೆ. ಈ ವರ್ಷ 5 ಸಾವಿರ ಕೋಟಿ ಕೊಡುತ್ತಿದ್ದೇನೆ” ಎಂದರು.
“ಕಲಬುರ್ಗಿಯಲ್ಲಿ ಜಯದೇವ ಆಸ್ಪತ್ರೆ, ವಿಮಾನ ನಿಲ್ದಾಣ, ಕ್ಯಾನ್ಸರ್ ಆಸ್ಪತ್ರೆ ಆರಂಭ ಮಾಡುತ್ತೇವೆ. ಕಾಂಗ್ರೆಸ್ ನವರು ಗ್ಯಾರೆಂಟಿ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಕಾಂಗ್ರೆಸ್ ನವರು ಮಂಡಳಿಗೆ ಮೀಸಲಿಟ್ಟ ಹಣವನ್ನೂ ಖರ್ಚು ಮಾಡದೇ ಕಾಲ ಹರಣ ಮಾಡಿದ್ದಾರೆ” ಎಂದರು.
“ಈ ಭಾಗದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ. ಆದರೂ ಈ ಭಾಗಕ್ಕೆ ಹಿಂದುಳಿದ ಪ್ರದೇಶ ಅನ್ನುವ ಹಣೆ ಪಟ್ಟಿ ತೆಗೆದು ಹಾಕಲು ಸಾಧ್ಯವಾಗಿಲ್ಲ. ವೈಜನಾಥ ಪಾಟೀಲರ ಹೋರಾಟದ ಫಲವಾಗಿ ನಮ್ಮ ನಾಯಕರಾದ ಯಡಿಯೂರಪ್ಪ ಅವರ ನಾಯಕತ್ವದಲ್ಲಿ 371ಜೆ ಜಾರಿಗೆ ತರಲಾಗಿದೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ 371 ಜೆ ಯಿಂದ ಈ ಭಾಗದ ಯುವಕರಿಗೆ ಯಾವುದೇ ಅನುಕೂಲ ಆಗಲಿಲ್ಲ. ನಾವು ಈ ಭಾಗದಲ್ಲಿ 14,000 ಶಿಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ” ಎಂದರು.
“ಪ್ರಧಾನಿಯವರು ಈ ಭಾಗದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಲು ಅಡಿಗಲ್ಲು ಹಾಕಿದ್ದಾರೆ. ನಾವು ಬೀದರ್ ನಿಂದ ಬಳ್ಳಾರಿವರೆಗೂ ರಾಷ್ಟ್ರೀಯ ಹೆದ್ದಾರಿ ಮಾಡುತ್ತಿದ್ದೇವೆ. ಇಲ್ಲಿ ಅಭ್ಯರ್ಥಿ ತಮ್ಮ ಕೊನೆಯ ಚುನಾವಣೆ ತಾವು ನಿವೃತ್ತಿ ಆಗುತ್ತೇನೆ ಅಂತ ಹೇಳುತ್ತಿದ್ದಾರೆ. ಅವರನ್ನು ಈಗಲೇ ನಿವೃತ್ತಿ ಮಾಡಿ ಅವರ ಆಸೆ ಈಡೇರಿಸಿ ಕೊಡಿ” ಎಂದರು.
“ಅಪ್ಪು ಅವರು ಜನ ಉಪಯೋಗಿ ಶಾಸಕ, ಅವರ ತಂದೆ ಮಾಡಿರುವ ಕೆಲಸಗಳು, ಅವರ ಕೆಲಸಗಳನ್ನು ನೋಡಿ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರದ ಸುರಕ್ಷತೆ ಬಯಸುವ ಪಕ್ಷ. ಅಂತಾರಾಷ್ಟ್ರೀಯ ನಾಯಕ ಮೋದಿ ನಾಯಕತ್ವ ಇರುವ ಪಕ್ಷ ಬಿಜೆಪಿ. ಆಯುಷ್ಮಾನ್ ಭಾರತ್, ವಿದ್ಯಾನಿಧಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಮೂಲಕ 3 ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ. ವಿದೇಶಿ ಬಂಡವಾಳ ಸೆಳೆಯುವಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ” ಎಂದರು.
ಚಿತ್ತಾಪುರ ವರದಿ:
ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇದ್ದಾರೆ. ರಾಜ್ಯಾಧ್ಯಕ್ಷರು ಬೇಲ್ ಮೇಲೆ ಇದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್ ನಾಯಕರು ಯಾರೂ ಚುನಾವಣೆಗೇ ನಿಲ್ಲುವ ಹಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
“ಮಣಿಕಂಠನ ಮೇಲೆ ಹಲವಾರು ಕೇಸ್ ಇದೆ. ಸಿಎಂ ಅವರ ಪರ ಮತ ಯಾಚನೆ ಮಾಡುವುದು ದುರಂತ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ರಾಷ್ಟ್ರೀಯ-ರಾಜ್ಯ ನಾಯಕರ ಮೇಲೆ ಕೇಸ್ ಇದೆ. ಅವರು ಬೇಲ್ ಮೇಲೆ ಇದ್ದಾರೆ. ನಿಮ್ಮ ಮಾತಿನಂತೆಯೇ ನಡೆಯುವುದಾದರೇ ನೀವೆಲ್ಲರೂ ರಾಜಕೀಯದಿಂದಲೇ ಹೊರಗುಳಿಯಬೇಕು” ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ವಿಸರ್ಜನೆ ಮಾಡಿ
ಮಹಾತ್ಮಾ ಗಾಂಧಿ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಗಾಂಧೀಜಿ ಕನಸು ನನಸು ಮಾಡುವ ಕಾಲ ಈಗ ಬಂದಿದೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಿ ಬೇರು ಸಮೇತ ಕಿತ್ತು ಹಾಕಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಕಾಲ ಬಂದಿದೆ” ಎಂದು ಬೊಮ್ಮಾಯಿ ಹೇಳಿದರು.
ಎಲ್ಲಿತ್ತು ಕಾಂಗ್ರೆಸ್ ನ ಸಾಮಾಜಿಕ ನ್ಯಾಯ ?
“ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ದೀನ ದಲಿತರ ರಕ್ಷಣೆ ಮಾಡ್ತೀವಿ ಎಂದು 30 ವರ್ಷದಿಂದ ಹೇಳಿಕೊಂಡು ಬಂದರು. ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷದಿಂದ ಬೇಡಿಕೆ ಇದ್ದರೂ ಕಾಂಗ್ರೆಸ್ ನವರು ಸಮುದಾಯಗಳಿಗೆ ಅನ್ಯಾಯ ಮಾಡುತ್ತ ಬಂದರು. ನಾನು ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಕಾಂಗ್ರೆಸ್ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟಿದ್ದೀನಿ. ಅದೇ ವರ್ಷ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವ ಕಾರ್ಯ ಮಾಡುತ್ತೇವೆ” ಎಂದರು.
ಕಾಂಗ್ರೆಸ್ ಗ್ಯಾರಂಟಿ ಚುನಾವಣೆವರೆಗೂ ಮಾತ್ರ
“ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್ ಗಳು ಮೇ 10 ರ ವರೆಗೆ ಮಾತ್ರ. ಚುನಾವಣೆ ಆದ ಮೇಲೆ ಗಳಗಂಟಿ ಮಾತ್ರ. ಪ್ರಧಾನಿ ಮೋದಿಯವರು ಕಾಂಗ್ರೆಸ್ ನ ಭ್ರಷ್ಟಾಚಾರವೇ ಅವರ ಗ್ಯಾರಂಟಿ ಎಂದು ಹೇಳಿದ್ದಾರೆ. ಮೇ 13 ರಂದು ಚಿತ್ತಾಪುರದಲ್ಲಿ ಗ್ಯಾರಂಟಿ ಇರೋದು ಮಣಿಕಂಠ ಒಬ್ಬನೇ. ಕರ್ನಾಟಕಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದೆ. ಮೋದಿ ಸರ್ಕಾರ ಜನರಿಗೆ ಹಲವಾರು ಯೋಜನೆಗಳನ್ನು ತಂದಿದೆ. ಅದೇ ರೀತಿ ಬಡ ಜನರಿಗೆ ಉಪಯೋಗವಾಗಲು ರಾಜ್ಯ ಸರ್ಕಾರದಿಂದಲೂ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ” ಎಂದರು.
ಹಿಂದುಳಿದ ಜನ ಭಿಕ್ಷುಕರಾ?
“ಬಸವಣ್ಣನ ಪಥದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಅವರು ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ ಅಂತ ಹೇಳಿದ್ದಾರೆ. ಹಾಗಾದ್ರೆ ಮೀಸಲಾತಿ ಪಡೆದ ಎಸ್ಸಿ ಎಸ್ಟಿ ಹಿಂದುಳಿದ ಜನರು ಭಿಕ್ಷುಕರಾ ? ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಅಡಿಯಲ್ಲಿ ಮೀಸಲಾತಿಯನ್ನು ಕೇಳಿದರೆ ಅವರನ್ನು ಭಿಕ್ಷುಕರನ್ನಾಗಿ ನೋಡುತ್ತೀರಾ?” ಎಂದು ಪ್ರಶ್ನಿಸಿದ ಬೊಮ್ಮಾಯಿ ಈ ರೀತಿ ಒಡೆದು ಆಳುವ ನೀತಿ ನಿಲ್ಲಬೇಕು” ಎಂದರು.