
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲ ಸಚಿವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿದ್ದಾರೆ.
ತಮ್ಮ ಬಳಿ ಇಟ್ಟುಕೊಂಡಿದ್ದ ಖಾತೆಗಳನ್ನೆಲ್ಲ ಸಚಿವರಿಗೆ ಹಂಚಿದ್ದಾರೆ. ಅನರ್ಹ ಶಾಸಕರ ಪರವಾಗಿ ಸುಪ್ರಿಂ ಕೋರ್ಟ್ ಆದೇಶ ಬರಬಹುದೆನ್ನುವ ನಿರೀಕ್ಷೆಯಲ್ಲಿ ಕೆಲವು ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಆದರೆ ಸುಪ್ರಿಂ ಕೋರ್ಟ್ ತೀರ್ಪು ಸಧ್ಯಕ್ಕೆ ಬರುವ ಸಾಧ್ಯತೆ ಕಾಣದ ಹಿನ್ನೆಲೆಯಲ್ಲಿ ಖಾತೆಗಳನ್ನು ಹಂಚಿದ್ದಾರೆ.

ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಜೊತೆಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆರ್.ಅಶೋಕ್ ಅವರಿಗೆ ಹೆಚ್ಚುವರಿಯಾಗಿ ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಹೊಣೆ ವಹಿಸಲಾಗಿದೆ. ಬಿ.ಶ್ರೀರಾಮುಲು ಅವರಿಗೆ ಹಿಂದುಳಿದ ವರ್ಗಗಳ ಇಲಾಖೆ, ಜಗದೀಶ ಶೆಟ್ಟರ್ ಅವರಿಗೆ ಸಾರ್ವಜನಿಕ ಸೌಕರ್ಯಗಳ ಖಾತೆ, ವಿ.ಸೋಮಣ್ಣ ಅವರಿಗೆ ತೋಟಗಾರಿಕೆ ಮತ್ತು ರೇಶ್ಮೆ, ಸುರೇಶ ಕುಮಾರ ಅವರಿಗೆ ಕಾರ್ಮಿಕ ಖಾತೆ ವಹಿಸಲಾಗಿದೆ.
ಸಿ.ಟಿ.ರವಿಗೆ ಸಕ್ಕರೆ, ಬಸವರಾಜ ಬೊಮ್ಮಾಯಿಗೆ ಸಹಕಾರ ಖಾತೆ ನೀಡಲಾಗಿದೆ. ಸಿ.ಸಿ.ಪಾಟೀಲ್ ಅವರಿಗೆ ಅರಣ್ಯ ಮತ್ತು ಪರಿಸರ, ಎಚ್.ನಾಗೇಶ ಅವರಿಗೆ ಕೌಶಲ್ಯಾಭಿವೃದ್ಧಿ, ಪ್ರಭು ಚವ್ಹಾಣ ಅವರಿಗೆ ಅಲ್ಪಸಂಖ್ಯಾತ ಮತ್ತು ಹಜ್ ಖಾತೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.