Latest

*ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ (ಶಿಕಾರಿಪುರ): ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಉಡುತಡಿಯಲ್ಲಿ “ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳದ ಉದ್ಘಾಟನೆ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯವನ್ನು ನೇರವೇರಿಸಿ ಮಾತನಾಡಿದರು.

ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಟ್ಟಡಕ್ಕೆ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರಲ್ಲದೇ ಶಿವನಪಾದವನ್ನು 10.ಕೋಟಿ ರೂ.ಗಳ ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಮಾದರಿ ತಾಲ್ಲೂಕು ಆಗಬೇಕು
ಇಂದು ಜನರಿಗೆ ಅಗತ್ಯವಿರುವ ಕೆಲಸಗಳು ಆಗಿವೆ. ಶಿಕಾರಿಪುರ ದೇವರ ನಾಡು. ಇದನ್ನು ಕೃಷಿ, ಶಿಕ್ಷಣ ಮತ್ತು ಆಧ್ಯಾತ್ಮಿಕ ವಲಯದಲ್ಲಿ ಮಾದರಿ ತಾಲ್ಲೂಕು ಆಗಿಸಬೇಕು ಎಂಬ ಚಿಂತನೆಯಿಂದ ಈ ಎಲ್ಲಾ ಕೆಲಸಗಳನ್ನು ಮಾಡಲಾಗುವುದು.
ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿಸವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು. ತಂದೆ ಮಕ್ಕಳ ಸಂಬಂಧ ನಿರಂತರವಾಗಿರುತ್ತದೆ. ಪ್ರೀತಿ, ವಿಶ್ವಾಸ, ರಾಜಕೀಯ ಮೀರಿದ ಸಂಬಂಧಗಳು ಇದು.. ಬಿ.ಎಸ್.ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕಾರ್ಯ ಚಿರಸ್ಮರಣೀಯ ಎಂದರು.

ನಡೆದು ಬಂದ ದಾರಿ
ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ. ಇಲ್ಲಿಂದ ಹೊರಟ ಶರಣರು, ಕರ್ನಾಟಕದಲ್ಲಿ ಶರಣ ಸಂಸ್ಕೃತಿ, ವಿಚಾರಗಳನ್ನು ಕಾಯಕ ಸಮುದಾಯಗಳ ಜಾಗೃತಿ ಮೂಡಿಸಿ ವಿಚಾರಗಳಿಗೆ ತತ್ವಾದರ್ಶ ನೀಡಿರುವ ಕೇಂದ್ರ ಬಸವ ಕಲ್ಯಾಣದ ಅನುಭವ ಮಂಟಪ. ಶಿಕಾರಿಪುರದಿಂದ ಬಸವ ಕಲ್ಯಾಣದವರೆಗೆ ನಡೆದು ಬಂದ ದಾರಿ ಇದು.12 ನೇ ಶತಮಾನದಲ್ಲಿ ಬದುಕಿನ ದಾರಿ ತೋರಿದವರು ಶಿವಶರಣರು. 21 ನೇ ಶತಮಾನದಲ್ಲಿ 9 ಶತಮಾನಗಳ ನಂತರ ಶಿಕಾರಿಪುರ ವನ್ನು ಬಸವಕಲ್ಯಾಣಕ್ಕೆ ಜೋಡಿಸಿರುವ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು. ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಅವರು ಎಂದೂ ಮುಖ್ಯ ಮಂತ್ರಿಯಾಗಬೇಕೆಂದು ಕನಸನ್ನು ಕಂಡವರಲ್ಲ. ಶಿಕಾರಿಪುರದಲ್ಲಿ ನಿರಂತರವಾಗಿ ದಣಿವರಿಯದೆ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದವರು. ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಅವರ ಮೂಲ ಮಂತ್ರ ಜಗತ್ತನ್ನೇ ಎದುರು ಹಾಕಿಕೊಳ್ಳಬಲ್ಲ ಕನ್ನಡದ ನಾಯಕ ಅವರು. ಕರ್ನಾಟಕ ಕಟ್ಟುವ ಕೆಲಸ ಮಾಡಿದ್ದು, ಉಡುತಡಿಯಿಂದ ಅಕ್ಕಮಹಾದೇವಿ ಶ್ರೀ ಶೈಲದ ಮಲ್ಲಿಕಾರ್ಜುನ ನವರೆಗೆ ಸಾರಿದ್ದ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಿಳಿಹೇಳುವ ಪುಣ್ಯಾತ್ಮರಾಗಿ ಯಡಿಯೂರಪ್ಪ ಇದ್ದಾರೆ. ಬಸವ ಕಲ್ಯಾಣ ಕ್ಕೆ 600 ಕೋಟಿ ರೂ.ಗಳನ್ನು ಒದಗಿಸಿದರು. ಮುಂದಿನ 10 ಪೀಳಿಗೆ ಅವರನ್ನು ಸ್ಮರಿಸುತ್ತಾರೆ. 12 ನೇ ಶತಮಾನದ ಕ್ರಾಂತಿಯನ್ನು ಮುಂದುವರೆಸಿಕೊಂಡು ಹೋಗುವ ಪುಣ್ಯದ ಕೆಲಸವನ್ನು ಕ್ರಾಂತಿ ರೂಪದಲ್ಲಿ ಮಾಡಿದ್ದು ಯಡಿಯೂರಪ್ಪ ಅವರು.

ಎಲ್ಲಾ ವರ್ಗದ ಜನಕ್ಕೆ ನ್ಯಾಯ

ಕನಕದಾಸರ ಕಾಗಿನೆಲೆಗೆ45 ಕೋಟಿ ರೂ. ಗಳನ್ನು ಒದಗಿಸಿದರು. ಬಾಡಾ ಕ್ಷೇತ್ರದ ಅಭಿವೃದ್ಧಿಗೆ 14 ಕೋಟಿ ರೂ.ಗಳನ್ನು ನೀಡಿ ಕೋಟೆ, ಅರಮನೆಯ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನ ಸೇರಿದಂತೆ ಎಲ್ಲಾ ವರ್ಗದ ಜನಕ್ಕೆ ನ್ಯಾಯ ನೀಡುವ ಸಾಮಾಜಿಕ ಪರಿವರ್ತಕ ಯಡಿಯೂರಪ್ಪ ಅವರು. ಕಲ್ಮಶ ಇಲ್ಲದ ಮನಸ್ಸು ಅವರದ್ದು ಎಂದರು.

ನಾಡು ಕಟ್ಟುವ ನಾಯಕರ ಅಗತ್ಯವಿದೆ
35 ವರ್ಷಗಳ ಕಾಲ ಅಧಿಕಾರ ಇಲ್ಲದೆ ಹೋರಾಡಿದರು. ಕರ್ನಾಟಕ ರಾಜಕಾರಣದಲ್ಲಿ ನಾಯಕ ಸಮೂಹವನ್ನು ಸೃಷ್ಟಿ ಮಾಡಿದ್ದು ರಾಮಕೃಷ್ಣ ಹೆಗಡೆ ಹಾಗೂ ಯಡಿಯೂರಪ್ಪ ಅವರು ಮಾತ್ರ ಎಂದರು. ಅವರು ನಿವೃತ್ತ ರಾಗುವ ಪ್ರಶ್ನೆಯೇ ಇಲ್ಲ. ಜನರು ಅವರನ್ನು ನಿವೃತ್ತರಾಗಲು ಬಿಡುವುದಿಲ್ಲ. ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಅವರಿಗಿದೆ. ಅವರ ಸೇವೆ ಈ ರಾಜ್ಯಕ್ಕೆ ವಿವಿಧ ರೂಪದಲ್ಲಿ ಸಿಗಲಿದೆ . ನಾಯಕ ತೀರ್ಮಾನಿಸಬಹುದು, ಆದರೆ ಜನರ ಪ್ರೀತಿಯ ಮುಂದೆ ತಲೆಬಾಗಲೇಬೇಕು. ಅನುಭವಿ ಜನನಾಯಕರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಅವರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ವಿದೆ. ಸ್ವಾರ್ಥ ರಾಜಕಾರಣದಿಂದ ಪ್ರಯೋಜನವಿಲ್ಲ. ಆದರೆ ನಾಡು ಕಟ್ಟುವ ನಾಯಕರ ಅಗತ್ಯವಿದೆ ಎಂದರು.

ಆನಂದಪುರದ ಮುರುಘರಾಜೇಂದ್ರ ಸ್ವಾಮೀಜಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ. ಬಸವರಾಜ, ಶಾಸಕ ಕುಮಾರ್ ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button