*ಬೆಳಗಾವಿಯಲ್ಲಿ ಕಾಮಗಾರಿ ವೇಳೆ ಚಿನ್ನದ ನಾಣ್ಯಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ : ವಿಬಿಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ 14 ಚಿನ್ನದ ನಾಣ್ಯಗಳು ದೊರೆತ ಘಟನೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.
ಕಾರ್ಮಿಕರು ಇವುಗಳನ್ನು ಕೂಡಲೇ ಇಂಚಲ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬಿ.ಸಿ.ಎಂ. ಹಾಸ್ಟೆಲ್ ಸಮೀಪ ವಿಬಿಜಿ ರಾಮ್ಜಿ ಯೋಜನೆಯಡಿ ಕಾಮಗಾರಿ ನಿರ್ವಹಿಸುತ್ತಿದ್ದರು. ಈ ವೇಳೆ ಕೂಲಿ ಕಾರ್ಮಿಕರಿಗೆ ಚಿನ್ನದ ನಾಣ್ಯಗಳು ದೊರೆತಿದ್ದು, ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಕೂಡಲೇ ಇಂಚಲ ಗ್ರಾ.ಪಂ ಕಾರ್ಯಾಲಯಕ್ಕೆ ತಂದು ಅಧಿಕಾರಿಗಳಿಗೆ ನೀಡಿದ್ದಾರೆ.
ನಾಣ್ಯಗಳನ್ನು ಸ್ವೀಕರಿಸಿದ ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪತಹಶೀಲ್ದಾರರು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮಸ್ಥರು ಹಾಗೂ ನಾಣ್ಯಗಳನ್ನು ಪತ್ತೆಹಚ್ಚಿದ ಕೂಲಿ ಕಾರ್ಮಿಕರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಯಿತು. ಬಳಿಕ ದೊರೆತಿರುವ 14 ನಾಣ್ಯಗಳನ್ನು ಪಂಚನಾಮೆ ಹಾಗೂ ವರದಿಯೊಂದಿಗೆ ತಾ.ಪಂ ಕಾರ್ಯಾಲಯಕ್ಕೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿದ್ದಾರೆ.
ನಾಣ್ಯಗಳು ಯಾವ ಕಾಲಕ್ಕೆ ಸೇರಿವೆ, ಅವುಗಳ ಐತಿಹಾಸಿಕ ಮಹತ್ವವೇನು ಎಂಬುದು ಸಂಬಂಧಿಸಿದ ತಜ್ಞರು ಹಾಗೂ ಸಕ್ಷಮ ಪ್ರಾಧಿಕಾರದ ಪರಿಶೀಲನೆಯ ಬಳಿಕ ಸ್ಪಷ್ಟವಾಗಬೇಕಿದೆ.
ಕಾಮಗಾರಿ ಸ್ಥಳದಲ್ಲಿ ದೊರೆತ ಅಮೂಲ್ಯ ವಸ್ತುಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ಸರ್ಕಾರದ ಗಮನಕ್ಕೆ ತಂದು ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸೆ.4ರಂದು ವರದಿ ಸಲ್ಲಿಸಿದ್ದು ನಾಣ್ಯಗಳನ್ನು ನಿಯಮಾನುಸಾರ ಸಕ್ಷಮ ಪ್ರಾಧಿಕಾರಕ್ಕೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಚಿತ್ರದಲ್ಲಿರುವ ನಾಣ್ಯಗಳು ಗಂಗರ ಕಾಲದ ತಲಕಾಡಿನ ಪಶ್ಚಿಮ ಗಂಗರು ಅಥವಾ ವಿಜಯನಗರ ಸಾಮ್ರಾಜ್ಯ ಕಾಲದ ಚಿನ್ನದ ನಾಣ್ಯಗಳಾಗಿವೆ.
‘ಗಜಪತಿ ವರಹ’ವರಹ, ಪಗಡ ನಾಣ್ಯಗಳು ಇವೆ. ನಾಣ್ಯಗಳ ಮೇಲ್ಬಾಗದಲ್ಲಿ ಅಲಂಕೃತಗೊಂಡ ಆನೆಯ ಚಿತ್ರವಿದೆ. ಗಂಗರ ರಾಜಲಾಂಛನವು ಮದಜಲ ಸುರಿಸುವ ಆನೆಯಾಗಿದ್ದು, ಇವುಗಳನ್ನು ‘ಗಜಪತಿ ಗದ್ಯಾಣ ಗಜಪತಿ ವರಹ ಎಂದು ಕರೆಯಲಾಗುತ್ತಿತ್ತು. ಸುಮಾರು ಕ್ರಿ.ಶ. 10ನೇ ಶತಮಾನದಿಂದ 15ನೇ ಶತಮಾನದ ಮಧ್ಯಕಾಲೀನ ಕರ್ನಾಟಕ ಅವಧಿಗೆ ಸೇರಿದವು ಎನ್ನಲಾಗಿದೆ.




