Kannada NewsNationalPolitics

*ಲಾಲು ಪ್ರಸಾದ್ ಯಾದವ್ ಪುತ್ರನ ಬಂಧನ*

ಪ್ರಗತಿವಾಹಿನಿ ಸುದ್ದಿ: ಆರ್‌ಜೆಡಿ ತೊರೆದು ‘ಜನಶಕ್ತಿ ಜನತಾದಳ  ಕಟ್ಟಿರುವ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಪೊಲೀಸರು ಬಂಧಿಸಿಸಲಾಗಿದ್ದು, ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ನೀಟ್ ಪರೀಕ್ಷಾ ಅಕ್ರಮ ಹಾಗೂ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ನಡೆದ ಬಿಹಾರ ಬಂದ್ ವೇಳೆ ಭಾರಿ ಹಂಗಾಮ ಸೃಷ್ಟಿಯಾಗಿದ್ದು, ಲಾಲು ಪ್ರಸಾದ ಯಾದವ್ ಪುತ್ರ ರಾತ್ರಿ ಬೆಳಗಾಗುವುದರೊಳಗೆ ಜೈಲು ಪಾಲಾಗಿದ್ದಾರೆ.

Home add -Advt

ಶನಿವಾರ ಸಂಜೆ ಪಾಟ್ನಾದ ಡಾಕ್ ಬಂಗಲೋ ಚೌರಾಹಾ ಬಳಿಯ ಮಾಲ್‌ನಿಂದ ತೇಜ್ ಪ್ರತಾಪ್‌ ಅವರನ್ನು ವಶಕ್ಕೆ ಪಡೆದ ಪಾಟ್ನಾ ಪೊಲೀಸರು, ದಿಘಾ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ತಡರಾತ್ರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು. ತಕ್ಷಣವೇ ಅವರನ್ನು ಪಾಟ್ನಾದ ಬೇವೂ‌ರ್ ಕೇಂದ್ರ ಜೈಲಿಗೆ’ ರವಾನಿಸಲಾಗಿದೆ.

ಬಿಹಾರ ಬಂದ್‌ ಸಂದರ್ಭದಲ್ಲಿ ಪಾಟ್ನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದಿದ್ದ ಪ್ರತಿಭಟನಾಕಾರರು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿ ಉರುಳಿಸಿದರು. ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಲು ತೇಜ್ ಪ್ರತಾಪ್ ಯಾದವ್ ಬೀದಿಗಿಳಿದು ಒಗ್ಗಟ್ಟು ಪ್ರದರ್ಶಿಸಿದ್ದರು. ಗಾಂಧಿ ಮೈದಾನ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಮುಖ ಎಫ್‌ಐಆ‌ರ್ ದಾಖಲಾಗಿದೆ.

ತೇಜ್ ಪ್ರತಾಪ್ ಯಾದವ್ ಅವರ ಬಿಡುಗಡೆಗಾಗಿ ಸೋಮವಾರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಾಗುವುದು,” ಎಂದು ಅವರ ವಕೀಲ ಜಗನ್ನಾಥ್ ಸಿಂಗ್ ತಿಳಿಸಿದ್ದಾರೆ. 

Related Articles

Back to top button