*ಮಕ್ಕಳ ಸಕಾರಾತ್ಮಕ ಬೆಳವಣಿಗೆಗೆ ಕಲಾ ಪ್ರತಿಭೆ ಕಾರ್ಯಕ್ರಮಗಳು ಅಗತ್ಯ: ರಾಮನಗೌಡ ಕನ್ನೋಳ್ಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುವೆಂಪುರವರು ಹೇಳಿದ ಮಾತಿನಂತೆ ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯ ಹೆಚ್ಚಿನದ್ದು, ಆತ್ಮಸೌಂದರ್ಯ ಹೊಂದಿದ ವ್ಯಕ್ತಿಯು ತಾನು ಬದುಕುವ ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ. ಇಂತಹ ವ್ಯಕ್ತಿಗಳು ಸಮಾಜವನ್ನು ಶಾಂತಿ, ಸಹನೆ, ಒಗ್ಗಟ್ಟಿನೊಂದಿಗೆ ಮುನ್ನಡೆಸುತ್ತಾರೆ ಎಂಬುದು ಕುವೆಂಪುರವರ ಸಂದೇಶವಾಗಿದೆ. ಮಕ್ಕಳು ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಲು ಪ್ರತಿಭಾ ಕಾರ್ಯಕ್ರಮಗಳು ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ (ಆ.03) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ “ಚಿಗುರು 2025-26” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲಾ ಪ್ರತಿಭೆ ಸಹಜವಾಗಿರುತ್ತದೆ, ಶಿಕ್ಷಣದ ಮೂಲಕ ಅದನ್ನು ಬೆಳೆಸಬೇಕು.ಕಲಾ ಅಭಿವ್ಯಕ್ತಿಯ ಮೂಲಕ ಮಗು ತನ್ನ ಭಾವನೆಗಳನ್ನು ಹೊರಹಾಕುತ್ತೆ. ಕಲೆಯು ಮಕ್ಕಳ ಒಳಗಿನ ಆತ್ಮಸೌಂದರ್ಯವನ್ನು ಬೆಳಗಿಸುತ್ತದೆ ಎಂದರು.
8 ರಿಂದ 14 ವರ್ಷದ ಒಳಗಿನ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಣ್ಣರ ಹಬ್ಬ “ಚಿಗುರು” ಕಾರ್ಯಕ್ರಮ ಸರ್ಕಾರವು ಆಯೋಜಿಸುತ್ತಿದೆ.
ಸರ್ಕಾರ ಇಂತಹ ಮಹತ್ವದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಬತ್ತ ಕುಟ್ಟಿ ಅಕ್ಕಿ ತೆಗೆಯುವಂತೆ ಮಕ್ಕಳಲ್ಲಿನ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ಕಾರ್ಯಕ್ರಮದ ಮೂಲಕ ಉದ್ದೇಶವಾಗಿದೆ ಎಂದು ಹೇಳಿದರು.
ಚಿಗುರು: ಕಲಾ ಪ್ರಕಾರಗಳು
ಸಿತಾರ ವಾದನ, ವಚನ ಗಾಯನ, ವಚನ ಸಂಗೀತ, ವೀರಗಾಸೆ, ರೂಪಕ, ಸಮೂಹ ನೃತ್ಯ, ನೃತ್ಯ ರೂಪಕ, ವಂಚನ ಸಂಗೀತ, ಏಕಪಾತ್ರಾಭಿನಯ ಹಾಗೂ ಕೈವಲ್ಯ ಪದಗಳು ಸೇರಿದಂತೆ ವಿವಿಧ ಕಲೆಗಳನ್ನು ಮಕ್ಕಳು ಪ್ರದರ್ಶಿಸಿದರು.
ಹಿರಿಯ ಕಲಾವಿದರಾದ ಸತ್ಯನಾರಾಯಣ ಭಟ್, ರೋಹಿಣಿ ಗಂಗಾಧರಯ್ಯ, ರೇಖಾ ಹೆಗಡೆ, ಯಲ್ಲಪ್ಪ ನಾಯ್ಕರ, ಗೂಳಪ್ಪ ವಿಜಯನಗರ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.