*ಅತ್ಯಾಚಾರ ಆರೋಪಿ, ಸ್ವಯಂಘೋಷಿತ ದೇವಮಾನವ ಖರತ್ ಜೊತೆ ನಂಟು: ಮಹಿಳಾ ಆಯೋಗದ ಅಧ್ಯಕ್ಷೆ ರಾಜೀನಾಮೆ*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಜೊತೆ ನಂಟು ಹೊಂದಿದ ಆರೋಪದ ಮೇಲೆ ವಿಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿರುವ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎನ್ ಸಿಪಿ ಮಹಿಳಾ ವಿಭಾಗದ ಮುಖ್ಯಸ್ಥೆಯೂ ಆಗಿರುವ ರೂಪಾಲಿ ಚಕಂಕರ್ ಡಿಸಿಎಂ ಹಾಗೂ ಪಕ್ಷದ ಅಧ್ಯಕ್ಷೆ ಸುನೇತ್ರಾ ಪವಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ ರೂಪಾಲಿ ಶುಕ್ರವಾರ ಸಂಜೆ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ರಾಜೀನಾಮೆ ನೀಡುವಂತೆ ಅವರು ಸೂಚಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ರೂಪಾಲಿ ಚಕಂಕರ್ ಅಶೋಕ್ ಖರತ್ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕಾದ ಸ್ಥಾನದಲ್ಲಿರುವ ರೂಪಾಲಿ ಚಕಂಕರ್, ಅತ್ಯಾಚಾರ ಆರೋಪಿ, ಮಾಂತ್ರಿಕ ಆಚರಣೆಯಲ್ಲಿ ತೊಡಗಿರುವಂತಹ ಖರತ್ ಜೊತೆ ನಿಕಟ ಸಂಪರ್ಕ ಹೊಂದಿರುವುದು ನೈತಿಕವಾಗಿ ಸೂಕ್ತವಲ್ಲ ಎಂದು ಶಿವಸೇನೆ ಪ್ರತಿಪಾದಿಸಿತ್ತು.
ಜ್ಯೋತಿಷಿ ಎಂದು ಹೇಳಿಕೊಂಡಿಒರುವ ಅಶೋಕ್ ಖರತ್ ನ ಪ್ರಭಾವದಿಂದ ರೂಪಾಲಿ ಚಕಂಕರ್ ಮಾಂತ್ರಿಕ ಆಚರಣೆಯ ಭಾಗವಾಗಿ ತನ್ನ ಉಂಗುರ ಬೆರಳನ್ನು ಕತ್ತರಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಶಿವಸೇನೆ ವಕ್ತಾರೆ ಸುಷ್ಮಾ ಅಂಧಾರೆ, ಚಕಂಕರ್ ಉಂಗುರ ಬೆರಳಿಗೆ ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.


