Kannada NewsKarnataka NewsLatest

ಮತ್ತೆ 95 ಮರಗಳ ಬಲಿಗೆ ಪ್ರಸ್ತಾವನೆ; ಅಮೂಲ್ಯ ಗಿಡ-ಮರಗಳಿಗೆ ಕೊಡಲಿ ಹಾಕಲು ಲೋಕೋಪಯೋಗಿ ಇಲಾಖೆ ಸಜ್ಜು

ರಸ್ತೆ ಕಾಮಗಾರಿಗೆ ಮರಗಳ ತೆರವು ಜನವರಿ 05 ಒಳಗಾಗಿ ಸಾರ್ವಜನಿಕರ ಆಕ್ಷೇಪಣೆ/ಅಹವಾಲು ಸಲ್ಲಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖಾನಾಪುರ ತಾಲೂಕಿನ ಜಾಂಬೋಟಿ ಶಾಖೆ ವ್ಯಾಪ್ತಿಯಲ್ಲಿ ಬರುವ ಜಾಂಬೋಟಿ ಜಂಕ್ಷನ್ ನಲ್ಲಿರುವ ಜಾಂಬೋಟಿ ರಬಕವಿ ಹೆದ್ದಾರಿ 0.000 ಮತ್ತು ಜತ್ತ ಜಾಂಬೋಟಿ ಹೆದ್ದಾರಿ 219.000 ಕಿ.ಮೀ ಜಾಂಬೋಟಿ ಗ್ರಾಮ ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಈ ಕಾಮಗಾರಿಗೆ ಅಪಾಯಕಾರಿಯಾಗುವ ಮರಗಳನ್ನು ತೆರವುಗೊಳಿಸಲು ಖಾನಾಪುರ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

 

Home add -Advt

ಜಾಂಬೋಟಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಜಂಗ್ಲಿ ಜಾತಿಯ 82 ಗಿಡಗಳು ಹಾಗೂ ಸಿಸಂ ಜಾತಿಯ 13 ಗಿಡಗಳನ್ನು ಕಡಿಯಲು ಅನುಮತಿ ಕೋರಲಾಗಿದೆ.

ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಅಪಾಯಕಾರಿಯಾಗಿರುವ ಮರಗಳು 50 ಕ್ಕಿಂತ ಜಾಸ್ತಿಯಾಗಿರುವುದರಿಂದ ಕರ್ನಾಟಕ ಮರಗಳ ಕಾಯ್ದೆ 1976 ರ ನಿಯಮ 8 (3) (vii) ರ ಪ್ರಕಾರ “ಪಬ್ಲಿಕ್ ಡಾಮನ್’ನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಪಡೆಯಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ/ ಅಹವಾಲುಗಳಿದ್ದಲ್ಲಿ ಜನವರಿ 05 ರ ಒಳಗಾಗಿ   ಆಕ್ಷೇಪಣೆ/ಅಹವಾಲು ಸಲ್ಲಿಸಬಹುದು ಎಂದು ಖಾನಾಪುರ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಬೆಳಗಾವಿ – ಗೋವಾ ಹೆದ್ದಾರಿ ಅಭಿವೃದ್ಧಿಗಾಗಿ ಈಗಾಗಲೆ ಸಾವಿರಾರು ಅಮೂಲ್ಯ ಮರಗಳನ್ನು ಕಳೆದುಕೊಂಡಿರುವ ಖಾನಾಪುರ ದಟ್ಟಾರಣ್ಯ ಪ್ರದೇಶದಲ್ಲಿ ಮತ್ತೆ ಕೇವಲ ವೃತ್ತ ಸೌಂದರ್ಯೀಕರಣಕ್ಕಾಗಿ ಮರಗಳನ್ನು ಬಲಿ ಪಡೆಯುತ್ತಿರುವುದು ವಿಪರ್ಯಾಸವೇ ಸರಿ. 

ಇದು ಖಾಸಗಿ ಜಮೀನಿನಲ್ಲಿರುವುದರಿಂದ ಅರಣ್ಯ ಇಲಾಖೆ ತಡೆಯುವುದು ಕಷ್ಟ. ಸಾರ್ವಜನಿಕ ಅಹವಾಲು ಆಲಿಕೆ ಕೇವಲ ಕಾನೂನಿನ ಕಣ್ಣಿಗೆ ಮಣ್ಣೆರೆಚುವುದಕ್ಕಷ್ಟೇ ಸೀಮಿತವಾಗಬಹುದು.

ಸಿಎಂ ಬದಲಾವಣೆ ಚರ್ಚೆ; ಅರುಣ್ ಸಿಂಗ್ ನೀಡಿದ ಪ್ರತಿಕ್ರಿಯೆಯೇನು? (ಯಡಿಯೂರಪ್ಪ ಬದಲಿಸುವಾಗಲೂ ಹೀಗೆ ಹೇಳಿದ್ದರು!)

Related Articles

Back to top button