*ಬಡಾಲ ಅಂಕಲಗಿಯಲ್ಲಿ ಕುಂಭೋತ್ಸವ, ಆರತಿ ಪೂಜೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದ ಆರಾಧ್ಯ ದೈವ ಹಾಗೂ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಸದ್ಗುರು ಸದಾನಂದ ಮಹಾರಾಜರ ರಥದ ಅಚ್ಚು ಹಾಗೂ ತೇರಿನ ಚಕ್ರಗಳ ಪೂಜೆಯ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗ್ರಾಮದ ಮಹಿಳೆಯರು ಭಕ್ತಿಭಾವದಿಂದ ಹಮ್ಮಿಕೊಂಡಿದ್ದ ಕುಂಭೋತ್ಸವ ಹಾಗೂ ಆರತಿ ಪೂಜೆಯಲ್ಲಿ ಮಾಜಿ ಸಚಿವರು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಮುತ್ತೈದೆಯರು ಸಾಂಪ್ರದಾಯಿಕವಾಗಿ ಕುಂಭಗಳನ್ನು ಹೊತ್ತುಕೊಂಡು ಭಕ್ತಿಗೀತೆ ಹಾಗೂ ಮಂಗಳ ವಾದ್ಯಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಶ್ರೀ ಸದ್ಗುರು ಸದಾನಂದ ಮಹಾರಾಜರ ರಥದ ಅಚ್ಚು ಹಾಗೂ ತೇರಿನ ಚಕ್ರಗಳಿಗೆ ವಿಶೇಷ ಪೂಜೆ ಹಾಗೂ ಆರತಿ ನೆರವೇರಿಸಲಾಯಿತು.

ಲಕ್ಷ್ಮೀ ಹೆಬ್ಬಾಳಕರ್ ಅವರು ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಂಡು, ಶ್ರೀ ಸದ್ಗುರು ಸದಾನಂದ ಮಹಾರಾಜರ ಆಶೀರ್ವಾದವನ್ನು ಪಡೆದುಕೊಂಡರು. ನಾಡಿನ ಹಾಗೂ ಜಿಲ್ಲೆಯ ಜನರಿಗೆ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ದೊರೆಯಲಿ. ರೈತರು, ಕಾರ್ಮಿಕರು ಸೇರಿದಂತೆ ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ ಬದುಕುವಂತಾಗಲಿ. ಗ್ರಾಮದ ಅಭಿವೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಸದ್ಗುರು ಸದಾನಂದ ಮಹಾರಾಜರು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಆಚರಣೆಗಳು ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು.
ರಥೋತ್ಸವದ ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.

ಗೃಹಲಕ್ಷ್ಮಿ ಹಣದಿಂದ ರಥ ನಿರ್ಮಾಣಕ್ಕೆ ಗ್ರಾಮಸ್ಥರ ಕೊಡುಗೆ
ಇದೇ ಸಂದರ್ಭದಲ್ಲಿ ಬಡಾಲ ಅಂಕಲಗಿ ಗ್ರಾಮದ ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳು ತಮ್ಮ ಒಂದು ತಿಂಗಳ ಗೃಹಲಕ್ಷ್ಮಿ ಕಂತಿನ ಹಣವನ್ನು ಶ್ರೀ ಸದ್ಗುರು ಸದಾನಂದ ಮಹಾರಾಜರ ರಥದ ನಿರ್ಮಾಣಕ್ಕೆ ನೀಡಲು ಮುಂದಾಗಿರುವ ವಿಷಯ ತಿಳಿದು ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಸ ವ್ಯಕ್ತಪಡಿಸಿದರು. ಸರ್ಕಾರದ ಯೋಜನೆಯಿಂದ ದೊರೆಯುವ ಹಣವನ್ನು ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ಕೆ ಬಳಸುವ ಮೂಲಕ ಮಹಿಳೆಯರು ತೋರಿರುವ ಭಕ್ತಿ, ಒಗ್ಗಟ್ಟು ಮತ್ತು ಸಾಮಾಜಿಕ ಕಾಳಜಿ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುವುದಾಗಿದೆ. ಇದೀಗ ಆ ಹಣವನ್ನು ಇಂತಹ ಸತ್ಕಾರ್ಯಕ್ಕೆ ಸ್ವಯಂಪ್ರೇರಣೆಯಿಂದ ನೀಡುವ ಮೂಲಕ ಬಡಾಲ ಅಂಕಲಗಿ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಚಯ್ಯ ಅಜ್ಜನವರು, ಖ್ಯಾತ ಪ್ರವಚನಕಾರರಾದ ಶ್ರೀ ಪ್ರಶಾಂತ ದೇವರು, ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಕುಂಭೋತ್ಸವ ಹಾಗೂ ಆರತಿ ಪೂಜೆಯ ಸಂದರ್ಭದಲ್ಲಿ ಗ್ರಾಮದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉತ್ಸಾಹದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



