
ಪ್ರಗತಿವಾಹಿನಿ ಸುದ್ದಿ: ಬ್ಯಾನರ್ ಕಟ್ಟುವ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ, ಫೈರಿಂಗ್ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಸಸ್ಪೆಂಡ್ ಆಗಿದ್ದ ನೂತನ ಎಸ್ ಪಿ ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನುವ ವದಂತಿ ಹರಡಿದೆ.
ಪವನ್ ನಜ್ಜೂರ್ ಬಳ್ಳಾರಿ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ 12 ಗಂಟೆ ಕಳೆದಿರಲಿಲ್ಲ. ಬಳ್ಳಾರಿ ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಫೈರಿಂಗ್ ನಡೆದಿದೆ. ಈ ವೇಳೆ ಗುಂಡೇಟು ತಗುಲಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಸಾವನ್ನಪ್ಪಿದ್ದಾನೆ.
ಘಟನೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಬಳ್ಳಾರಿ ಎಸ್ ಪಿ ಪವನ್ ನಜ್ಜೂರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಪವನ್ ಸಸ್ಪೆಂಡ್ ಆಗಿದ್ದರು. ಇದರಿಂದ ತೀವ್ರವಾಗಿ ಅವಮಾನಗೊಂಡು, ಮನನೊಂದಿದ್ದ ಪವನ್ ನಿನ್ನೆ ತುಮಕೂರಿಗೆ ತೆರಳಿದ್ದರು.
ತುಮಕೂರಿನ ಶಿರಾ ತಾಲೂಕಿನ ಬರಗೂರಿನಲ್ಲಿರುವ ತನ್ನ ಸ್ನೇಹಿತನ ಫಾರ್ಮ್ ಹೌಸ್ ಗೆ ತೆರಳಿದ್ದರು. ಅಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪವನ್ ನಜ್ಜೂರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸುದ್ದಿ ಹರಡಿದೆ.
ವದಂತಿ ಸುಳ್ಳು
ಬಳ್ಳಾರಿ ಎಸ್ಪಿ ಪವನ್ ನಿಜ್ಜೂರ್ (Pavan Nejjuru) ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಅವರ ಸ್ನೇಹಿತ, ಬೆಂಗಳೂರು ಸಿಸಿಬಿ ಡಿಸಿಪಿ ಶ್ರೀಹರಿಬಾಬು (Shrihari Babu) ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಶಿರಾ ಬಳಿಯ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪವನ್ ಆತ್ಮಹತ್ಯೆಗೆ ಯತ್ನಿಸಿದ್ದ ವರದಿ ಸುಳ್ಳು ಎಂದಿದ್ದಾರೆ.




