*ಮಹಾರಾಷ್ಟ್ರದ ವೈಷ್ಣವಿ ಹಗವಾನೆ ಪ್ರಕರಣ: ಕರ್ನಾಟಕದ ಮಾಜಿ ಸಚಿವನ ಪುತ್ರ ಬಂಧನ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರುವ ವೈಷ್ಣವಿ ಹಗವಾನೆ ಆತ್ಮಹತ್ಯೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ನೆರವು ನೀಡಿದ ಆರೋಪದ ಮೇಲೆ ಕರ್ನಾಟಕದ ಮಾಜಿ ಇಂಧನ ಸಚಿವ ವೀರಕುಮಾರ್ ಪಾಟೀಲ್ ಅವರ ಪುತ್ರ ಪ್ರೀತಮ್ ಪಾಟೀಲ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬಂದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಪ್ರಕರಣ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರು ಪ್ರೀತಮ್ ವೀರಕುಮಾರ್ ಪಾಟೀಲ್ (47 ವರ್ಷ, ಬೆಳಗಾವಿ) ಸೇರಿದಂತೆ ಮೋಹನ್ ಅಲಿಯಾಸ್ ಬಂದು ಉತ್ತಮ್ ಭೇಗಡೆ (60), ಬಂದು ಲಕ್ಷ್ಮಣ್ ಫಾಟಕ್ (55), ಅಮೋಲ್ ವಿಜಯ್ ಜಾಧವ್ (35) ಮತ್ತು ರಾಹುಲ್ ದಶರಥ್ ಜಾಧವ್ (45) ಅವರನ್ನು ಬಂಧಿಸಿದ್ದಾರೆ.
ಮುಖ್ಯ ಆರೋಪಿಗಳಾದ ರಾಜೇಂದ್ರ ಮತ್ತು ಸುಶೀಲ್ ಹಗವಾನೆ ತಲೆಮರೆಸಿಕೊಂಡಿದ್ದಾಗ ಮಾಜಿ ಸಚಿವ ವೀರ್ಕುಮಾರ್ ಪಾಟೀಲ್ ರ ಪುತ್ರ ಪ್ರೀತಮ್ ಆರೋಪಿಗಳಿಗೆ ಆಶ್ರಯ, ಆರ್ಥಿಕ ನೆರವು ನೀಡಿದ್ದು ತನಿಖೆಯಿಂದ ತಿಳಿದುಬಂದಿದೆ.
ಕರ್ನಾಟಕದ ‘ಹೆರಿಟೇಜ್ ರೆಸಾರ್ಟ್’ನಲ್ಲಿ ರಾಜೇಂದ್ರ ಹಗವಾನೆಗಾಗಿ ಮಾಡಲಾಗಿದ್ದ ಬುಕಿಂಗ್ ಪ್ರೀತಮ್ ಪಾಟೀಲ್ ಹೆಸರಿನಲ್ಲಿತ್ತು. ಪೊಲೀಸರು ಆರೋಪಿ ತಪ್ಪಿಸಿಕೊಳ್ಳುವ ಪ್ರತಿ ಹಂತದಲ್ಲೂ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಲಾಡ್ಜ್ ಹೋಟೆಲ್ ಮತ್ತು ಫಾರ್ಮ್ ಹೌಸ್ ದಾಖಲೆಗಳಲ್ಲಿ ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ. ಆರೋಪಿಗೆ ನೆರವು ನೀಡಿದ ಇತರರನ್ನು ಪತ್ತೆ ಹಚ್ಚಲು ಪೊಲೀಸರು ಪ್ರತ್ಯೇಕ ತನಿಖಾ ತಂಡ ರಚಿಸಿದ್ದಾರೆ.